40 ಅಡಿ ಆಳದ ಕಂದಕಕ್ಕೆ ಉರುಳಿದ ಕೆಎಸ್​ಆರ್​ಟಿಸಿ ಬಸ್: 60ಕ್ಕೂ ಹೆಚ್ಚು ಪ್ರಯಾಣಿಕರು ಪಾರು!

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಸಮಗೋಡು ಬಳಿ 40 ಅಡಿ ಆಳದ ಕಂದಕಕ್ಕೆ ಕೆಎಸ್​ಆರ್​ಟಿಸಿ (KSRTC Bus) ಬಸ್ ಉರುಳಿರುವಂತಹ ಘಟನೆ ನಡೆದಿದೆ.
ಎದುರಿಗೆ ಬಂದ ವಾಹನಕ್ಕೆ ಸೈಡ್ ಕೊಡುವಾಗ ಕಂದಕಕ್ಕೆ ಉರುಳಿ ದುರಂತ ಸಂಭವಿಸಿದೆ. 40 ಅಡಿ ಆಳದಲ್ಲಿ ಮರಕ್ಕೆ ಕೆಎಸ್​ಆರ್​ಟಿಸಿ ಬಸ್ ಸಿಲುಕಿ ತಲೆಕೆಳಗಾಗಿದ್ದು, ಬಸ್​ನಲ್ಲಿ ಮಹಿಳೆಯರು, ಮಕ್ಕಳು ಸೇರಿ 60ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರಾಗಿದ್ದಾರೆ.

ಮರ ತಡೆಯದಿದ್ದರೆ ಇನ್ನೂ 100 ಅಡಿ ಆಳಕ್ಕೆ ಬಸ್ ಬೀಳುತ್ತಿತ್ತು. ಬೆಂಗಳೂರಿನಿಂದ ಹೊಸನಗರ ಮಾರ್ಗವಾಗಿ ಭಟ್ಕಳಕ್ಕೆ ಬಸ್ ತೆರಳುತ್ತಿತ್ತು. ಘಟನೆ ನಡೆಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಸಹಾಯಕ್ಕೆ ಧಾವಿಸಿದ್ದಾರೆ.