ಡೈಲಿ ವಾರ್ತೆ: 03/ಜುಲೈ /2024

ಮಂಗಳೂರು: ಐರಾವತ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ 67.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್‌ನಲ್ಲಿದ್ದ ಸುಮಾರು 67.75 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳವುಗೈದಿರುವ ಬಗ್ಗೆ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು.

ಕಾರ್ಯಕ್ರಮದಲ್ಲಿ ತೊಡಲೆಂದು ಅವರು ಬ್ಯಾಗ್‌ನಲ್ಲಿ ಚಿನ್ನಾಭರಣವನ್ನು ಕೊಂಡೊಯ್ದಿದ್ದಾರೆ. ಅದರಲ್ಲಿ 110ಗ್ರಾಂ ತೂಕದ ವಜ್ರದ ಹರಳುಗಳಿರುವ ವಿವಿಧ ಬಗೆಯ ಚಿನ್ನಾಭರಣಗಳಿತ್ತು. ಈ ಚಿನ್ನಾಭರಣವನ್ನು ತಮ್ಮ ಹ್ಯಾಂಡ್‌ಬ್ಯಾಗ್ ನಲ್ಲಿರಿಸಿ ಜೂನ್ 19ರಂದು ಬೆಳಗ್ಗೆ 7 ಗಂಟೆಗೆ ಮಂಗಳೂರಿನಿಂದ ಕೆಎಸ್‌ಆರ್‌ಟಿಸಿ ಐರಾವತ ಬಸ್‌ನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದರು.

ಹಾಸನ ತಲುಪಿದಾಗ ಅವರ ಹ್ಯಾಂಡ್ ಬ್ಯಾಗ್‌ ಪರಿಶೀಲಿಸಿದಾಗ ಬ್ಯಾಗ್‌ನಲ್ಲಿಟ್ಟಿದ್ದ ಚಿನ್ನಾಭರಣಗಳು ಕಳುವಾಗಿತ್ತು. ಮಂಗಳೂರು – ಹಾಸನ ನಡುವೆ ಅವರ ಪಕ್ಕದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ನಡು ವಯಸ್ಸಿನ ಮಹಿಳೆ ಕಳವುಗೈದಿರುವ ಸಾಧ್ಯತೆಯಿದೆ ಎಂದು ಚಿನ್ನಾಭರಣ ಕಳೆದುಕೊಂಡ ಮಹಿಳೆ ಉರ್ವ ಪೊಲೀಸರಿಗೆ ದೂರು ನೀಡಿದ್ದಾರೆ.