ಡೈಲಿ ವಾರ್ತೆ: 04/ಜುಲೈ /2024

ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿದ ಪ್ರಕರಣ – ಐವರ ಮೃತದೇಹ ಪತ್ತೆ, ಕಾರ್ಯಾಚರಣೆ ಮುಕ್ತಾಯ

ವಿಜಯಪುರ: ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ ಐವರು ಜಲಸಮಾಧಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ದಳ ಸಿಬ್ಬಂದಿ ಐವರ ಮೃತದೇಹವನ್ನೂ ಪತ್ತೆ ಮಾಡಿ ನೀರಿನಿಂದ ಹೊರತೆಗೆದಿದ್ದು, ಕಾರ್ಯಾಚರಣೆ ಮುಕ್ತಾಯಗೊಂಡಿದೆ.

ಜಲ ಸಮಾಧಿಯಾಗಿದ್ದ ಐವರ ಪೈಕಿ ಮೂವರ ಶವಗಳ್ನು ಬುಧವಾರ ಹೊರ ತೆಗೆಯಲಾಗಿದೆ. ಪುಂಡಲಿಕ ಯಂಕಂಚಿ, ತಯ್ಯಬ್ ಚೌಧರಿ ಹಾಗೂ ದಶರಥ ಗೌಡರ್ ಶವಗಳನ್ನು ಈಗಾಗಲೇ ಹೊರ ತೆಗೆಯಲಾಗಿದೆ. ಇನ್ನುಳಿದ ಇಬ್ಬರಿಗಾಗಿ ಶೋಧಕಾರ್ಯ ಮುಂದುವರೆದಿತ್ತು. ಇಂದು 30 ಜನ ಸಿಬ್ಬಂದಿ ಹಾಗೂ ಐದು ಬೋಟ್‌ಗಳ ಸಹಾಯದಿಂದ ಶೋಧಕಾರ್ಯ ಪ್ರಾರಂಭಿಸಿದ್ದು, ರಫೀಕ್ ಆಲಮೇಲ (40) ಹಾಗೂ ಮೆಹಬೂಬ್ ವಾಲಿಕಾರ್ (35) ಮೃತದೇಹವನ್ನು ಪತ್ತೆಹಚ್ಚಿ ನೀರಿನಿಂದ ಹೊರತೆಗೆದಿದ್ದಾರೆ.

ಜುಲೈ 2ರ ಮಂಗಳವಾರ ಸಂಜೆ 4:30ರ ಸುಮಾರಿಗೆ ಘಟನೆ ನಡೆದಿತ್ತು. ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ ಏಳು ಜನ ನೀರುಪಾಲಾಗಿದ್ದರು. ಈ ಪೈಕಿ ಓರ್ವ ಈಜಿ ದಡ ಸೇರಿದ್ದರೆ ಮತ್ತೊರ್ವನನ್ನು ರಕ್ಷಣೆ ಮಾಡಲಾಗಿತ್ತು. ಇನ್ನು ಘಟನೆಯಲ್ಲಿ ಸಾವನ್ನಪ್ಪಿದವರ ಮೃತದೇಹಗಳನ್ನು ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.