ಡೈಲಿ ವಾರ್ತೆ: 06/ಜುಲೈ /2024

ಸ್ಪೈಸ್‌ಜೆಟ್ ಏರ್‌ಲೈನ್ಸ್ ವಿಮಾನದಲ್ಲಿ ಫೈಲೆಟ್ ಇಲ್ಲದೆ 12 ಗಂಟೆಗಳ ಕಾಲ ಲಾಕ್ ಆದ ಪ್ರಯಾಣಿಕರು!

ಬೆಂಗಳೂರು: ಸ್ಪೈಸ್‌ಜೆಟ್ ಏರ್‌ಲೈನ್ಸ್ ಎಡವಟ್ಟಿನಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ 12 ಗಂಟೆಗಳ ಕಾಲ ವಿಮಾನದಲ್ಲಿಯೇ ಲಾಕ್ ಆಗಿರುವ ಪ್ರಯಾಣಿಕರು ಕೊನೆಗೂ ಬೆಂಗಳೂರಿಗೆ ಬಂದಿಳಿದಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರಬೇಕಿದ್ದ SG8151 ಸ್ಪೈಸ್‌ಜೆಟ್ (SpiceJet Flight), 12 ಗಂಟೆಗಳ ಕಾಲ ಟೆಕಾಫ್ ಆಗದೇ, ದೆಹಲಿಯ ವಿಮಾನ ನಿಲ್ದಾಣದ ರನ್ ವೇ ನಲ್ಲೆ ನಿಂತುಕೊಂಡಿತ್ತು. ಹೀಗಾಗಿ ಪ್ರಯಾಣಿಕರು 12 ಗಂಟೆ ಊಟ, ನೀರು ಇಲ್ಲದೆ ವಿಮಾನದಲ್ಲಿಯೇ ಅಸ್ವಸ್ಥಗೊಂಡಿದ್ರು. ಶುಕ್ರವಾರ ಸಂಜೆ 7:40 ರ ಸಮಯಕ್ಕೆ ಟೇಕಾಫ್ ಆಗಬೇಕಿದ್ದ ವಿಮಾನ ಹಲವು ಗಂಟೆ ಕಳೆದ್ರೂ ಹಾರಾಟ ನಡೆಸಿರಲಿಲ್ಲ. ಪೈಲಟ್ ಬಂದ ಬಳಿಕ ವಿಮಾನ ಬೆಂಗಳೂರಿಗೆ ಹಾರಾಟ ಮಾಡಿದೆ.

ಇತ್ತ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಸ್ಪೈಸ್‌ಜೆಟ್ ಏರ್ ಲೈನ್ಸ್ ವಿರುದ್ಧ ಪ್ರಯಾಣಿಕರು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ರು. ವಿಮಾನದಲ್ಲಿ ಊಟ, ನೀರು ಇಲ್ಲದೆ ಕೆಲ ಪ್ರಯಾಣಿಕರು ಅಸ್ವಸ್ಥಗೊಂಡಿದ್ರು. ಏರ್ ಲೈನ್ಸ್ ನ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡು, ಅಲ್ಲೇ ಪ್ರತಿಭಟಿಸ್ತಿದ್ದಂತೆ ತಾಂತ್ರಿಕದೋಷ ಅಂತ ಸಮಾಜಾಯಿಷಿ ನೀಡಿದ್ರು. ಆದರೆ ಅಸಲಿಗೆ ಆ ಫ್ಲೈಟ್‍ನಲ್ಲಿ ಪೈಲಟ್ ಅವರೇ ಇರಲಿಲ್ಲ ಅನ್ನೋದು ಇಂದು ಬೆಳಗ್ಗೆ ಗೊತ್ತಾಗಿದೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಪೈಲಟ್ ಬಂದ ಬಳಿಕ ವಿಮಾನ ಬೆಂಗಳೂರಿಗೆ ಹಾರಾಡಿದೆ ಎಂದು ಪ್ರಯಾಣಿಕರು ತಿಳಿಸಿದರು.

ವಿಮಾನದಲ್ಲಿದ್ದ ಪ್ರಯಾಣಿಕರನ್ನ ಹೊರ ಬಾರದಂತೆ ಏರ್ ಲೈನ್ಸ್ ಸಿಬ್ಬಂದಿ ತಡೆದಿದ್ರು. ಏರ್ ಲೈನ್ಸ್ ನ ನಿರ್ಲಕ್ಷ್ಯ ಹಾಗೂ ಸಿಬ್ಬಂದಿ ವರ್ತನೆಯಿಂದ ರೊಚ್ಚಿಗೆದ್ದ ಪ್ರಯಾಣಿಕರು ಗಲಾಟೆ ಮಾಡಿದ್ದಾರೆ. ಈ ವೇಳೆ ಸಿಬ್ಬಂದಿ ಕೆಲ ಪ್ರಯಾಣಿಕರ ಮೊಬೈಲ್ ಕಿತ್ತುಕೊಂಡು ಹೊಡೆದು ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ.