ಡೈಲಿ ವಾರ್ತೆ: 09/ಜುಲೈ /2024

ದಕ್ಷಿಣಕನ್ನಡ: ತಾಕತ್ತಿದ್ದರೆ ಒಬ್ಬ ಕಾರ್ಯಕರ್ತನ ಮೈ ಮುಟ್ಟಿ ನೋಡಲಿ – ಭರತ್ ಶೆಟ್ಟಿಗೆ ರಮನಾನಾಥ ರೈ ಸವಾಲು

ಮಂಗಳೂರು: ರಾಹುಲ್ ಗಾಂಧಿಯವರ ಕುರಿತು ಏಕವಚನದಲ್ಲಿ ಮಾತನಾಡಿ ‘ಕೆನ್ನೆಗೆ ಬಾರಿಸಬೇಕು’ ಎಂದು ಹೇಳಿಕೆ ನೀಡಿರುವ ಶಾಸಕ ಡಾ| ಭರತ್ ಶೆಟ್ಟಿ ಒಬ್ಬ ನಾಲಾಯಕ್ ರಾಜಕಾರಣಿ. ಆತನಿಗೆ ತಾಕತ್ತಿದ್ದರೆ, ಗಂಡು ಮಗ ಆಗಿದ್ದರೆ ಜಿಲ್ಲೆಯ ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರನ್ನು ಮುಟ್ಟಿ ನೋಡಲಿ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮನಾನಾಥ ರೈ ಅವರು ಸವಾಲು ಹಾಕಿದ್ದಾರೆ.

ಮಂಗಳವಾರ ನಗರದ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಲೆ ಸರಿಲ್ಲ, ಹುಚ್ಚ’ ಎನ್ನುವ ಪದಗಳನ್ನೂ ಭರತ್ ಶೆಟ್ಟಿ ಬಳಸಿದ್ದು, ಇಂತಹ ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ. ನನ್ನ ಮೇಲೂ ಬಿಜೆಪಿಯವರು ಸಾಕಷ್ಟು ಆರೋಪ ಮಾಡಿದ್ದಾರೆ. ಹುಟ್ಟನ್ನೇ ಪ್ರಶ್ನಿಸಿ ತಾಯಿಯ ಮೇಲೆ ಆರೋಪ ಮಾಡಿದ್ದಾರೆ. ಇದು ಬಿಜೆಪಿಯವರ ನಡವಳಿಕೆ. ಆದರೆ ನಾವು ಅಂತಹ ಪ್ರಶ್ನೆಗಳನ್ನು ಕೇಳುವುದಿಲ್ಲ. ಆದರೆ ನಾವೇನು ಬಳೆ ತೊಟ್ಟು ಕುಳಿತುಕೊಳ್ಳುವುದಿಲ್ಲ, ಜಿಲ್ಲೆಯಲ್ಲಿ ಪಕ್ಷ ಸೋತಿರಬಹುದು, ಆದರೆ ಸತ್ತಿಲ್ಲ. ಸರಕಾರ ಅವರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಭರತ್ ಶೆಟ್ಟಿ ಒಬ್ಬ ಚಿಲ್ಲರೆ ರಾಜಕಾರಣಿ: ಐವನ್ ಡಿ’ಸೋಜಾ
ಮಂಗಳೂರು: ಶಾಸಕ ಭರತ್ ಶೆಟ್ಟಿ ಒಬ್ಬ ಚಿಲ್ಲರೆ ರಾಜಕಾರಣಿ. ಸಂಸ್ಕೃತಿ ಇಲ್ಲದ ರಾಜಕಾರಣಿ. ಶಾಸಕ ಸ್ಥಾನಕ್ಕೆ ಅಗೌರವ ತೋರಿಸಿ ಶಾಸಕರ ಮಾನ ಹರಾಜು ಮಾಡಿದ್ದಾರೆ. ಶಾಸಕನಾಗಲೂ ಅನರ್ಹನಾಗಿರುವ ವ್ಯಕ್ತಿ. ರಾಹುಲ್ ಗಾಂಧಿಯವರಿಗೆ ‘ಕೆನ್ನೆಗೆ ಬಾರಿಸಬೇಕು’ ಎಂದು ಹೇಳುವುದರ ಜತೆಗೆ ನಾಯಿಗೆ ಹೋಲಿಸಿದ್ದಾರೆ. ನಾಯಿಗೆ ಇರುವ ಬುದ್ಧಿಯೂ ಶಾಸಕ ಭರತ್ ಶೆಟ್ಟಿಗೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಆರೋಪಿಸಿದರು.
ಶಸ್ತ್ರಾಸ್ತ್ರ ಹಿಡಿಯುವ ಬಗ್ಗೆಯೂ ಪ್ರಚೋದನಕಾರಿಯಾಗಿ ಮಾತನಾಡಿದ್ದು, ಅವರ ಮೇಲೆ ಪೊಲೀಸ್ ಆಯುಕ್ತರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ, ತಕ್ಷಣ ಅವರನ್ನು ಬಂಧಿಸಬೇಕು. ಪ್ರಧಾನಿಯವರಿಗೇ ರಾಹುಲ್ ಗಾಂಧಿಯವರನ್ನು ಎದುರಿಸಲು ತಾಕತ್ತಿಲ್ಲ, ಇನ್ನು ಚಿಲ್ಲರೆ ಗಿರಾಕಿಯಾಗಿರುವ ಭರತ್ ಶೆಟ್ಟಿ ಯಾವ ಲೆಕ್ಕ. ಮುಂದಿನ ಆರು ತಿಂಗಳು ಕೂಡಾ ಕೇಂದ್ರ ಸರಕಾರ ಉಳಿಯುವುದಿಲ್ಲ.ಅದಕ್ಕೆ ಹಾದಿ ಬೀದಿಯಲ್ಲಿ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ. ತಾಕತ್ತಿದ್ದರೆ ಅವರಿಗೆ ಹೊಡೆದು ನೋಡಲಿ ಸವಾಲು‌ ಹಾಕಿದರು.