ಡೈಲಿ ವಾರ್ತೆ: 09/ಜುಲೈ /2024

ಕುಂದಾಪುರ: ಸಹನಾ ಸಮೂಹ ಸಂಸ್ಥೆ ಮಾಲೀಕ ಸುರೇಂದ್ರ ಶೆಟ್ಟಿಯ ಕೊಲೆಗೆ ಯತ್ನ – ಓರ್ವನ ಬಂಧನ,ಇನ್ನೊರ್ವನಿಗಾಗಿ ಶೋಧ

ಕುಂದಾಪುರ: ಸಹನಾ ಸಮೂಹ ಸಂಸ್ಥೆಗಳ ಮಾಲೀಕ ಸುರೇಂದ್ರ ಶೆಟ್ಟಿ ಅವರ ಕೊಲೆ ಮಾಡಲು ಇಬ್ಬರು‌ ದುಷ್ಕರ್ಮಿಗಳು ವಿಫಲಯತ್ನ ನಡೆಸಿದ ಘಟನೆ ಜು.7 ರಂದು ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ.

ಎಸ್‌ಎಸ್ಎಸ್ ಟ್ರಾವೆಲ್ಸ್ ಎಂಬ ಸಂಸ್ಥೆಯ ಮಾಲೀಕ ಸತೀಶ್ ಶೆಟ್ಟಿ (53) ಬಂಧಿತ ಆರೋಪಿಯಾಗಿದ್ದು, ಪುತ್ರ ಸನ್ನಿಧಿ ಶೆಟ್ಟಿ ತಲೆಮರೆಸಿಕೊಂಡಿದ್ದಾನೆ.

ಸಹನಾ ಸುರೇಂದ್ರ ಶೆಟ್ಟಿ ಅವರ ಪತ್ನಿ ಕುಂದಾಪುರ ನಗರದ ಎ.ಎಸ್‌ ಟ್ರೇಡರ್‌ ಎಂಬ ಪ್ಲ್ಯಾಟ್ ನಲ್ಲಿ ಮಳೆ ನೀರಿಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದರು. ಇದಕ್ಕೆ 1ನೇ ಮಹಡಿಯಲ್ಲಿರುವ ಸತೀಶ ಶೆಟ್ಟಿ ಎಂಬಾತ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಈ ವಿಚಾರವಾಗಿ ಸುರೇಂದ್ರ ಶೆಟ್ಟಿಯವರಿಗೆ ಕರೆ ಮಾಡಿ ಅವಾಚ್ಯವಾಗಿ ಬೈದಿದ್ದು ಜು.7 ರಂದು ಬೆಳಿಗ್ಗೆ ಕುಂದಾಪುರದ ಕೆ.ಎಸ್.ಆರ್.ಟಿ.ಸಿ ಡಿಪ್ಪೋ ಎದುರಿನ ಸರ್ವೀಸ್‌ ರಸ್ತೆಯಲ್ಲಿ ಸುರೇಂದ್ರ ಶೆಟ್ಟಿಯವರ ಕಾರಿಗೆ ತಮ್ಮ ಇನ್ನೋವಾ ಕಾರನ್ನು ಅಡ್ಡ ನಿಲ್ಲಿಸಿ ಕಬ್ಬಿಣದ ರಾಡ್ ಮೂಲಕ ಹಲ್ಲೆ ನಡೆಸಲು ಯತ್ನಿಸಿದ್ದರು. ಬಳಿಕ ಕಾರಿನ ಗ್ಲಾಸ್‌ ಹಾಗೂ ಕಾರಿನ ಡೋರ್ ಅನ್ನು ಜಖಂ ಮಾಡಿದ್ದು, ಪೋಲೀಸರಿಗೆ ದೂರು ನೀಡಿದ್ದಲ್ಲಿ ಕೊಲ್ಲುವುದಾಗಿ ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ಪ್ರಕರಣ ಸಂಬಂಧ ಕುಂದಾಪುರ ಪೊಲೀಸರು ಆರೋಪಿ ಸತೀಶ್ ಶೆಟ್ಟಿಯನ್ನು ಬಂಧಿಸಿ‌, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನೋರ್ವ ಆರೋಪಿ‌ ಸನ್ನಿಧಿ ಶೆಟ್ಟಿ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ. ಸತೀಶ್ ಶೆಟ್ಟಿ ಮೇಲೆ ಈ ಹಿಂದೆಯೂ‌ ವಂಚನೆ ಸಹಿತ ಇತರ ಪ್ರಕರಣಗಳ ಬಗ್ಗೆ ದೂರುಗಳಿರುವುದಾಗಿ ತಿಳಿದುಬಂದಿದೆ.