ಡೈಲಿ ವಾರ್ತೆ: 12/ಜುಲೈ /2024

ನೇಪಾಳ: ಭಾರೀ ಭೂಕುಸಿತದಿಂದ ನದಿಗುರುಳಿದ ಎರಡು ಬಸ್ಸು – 63 ಮಂದಿ ನಾಪತ್ತೆ!

ಕಠ್ಮಂಡು: ಶುಕ್ರವಾರ ಮುಂಜಾನೆ ಮಧ್ಯ ನೇಪಾಳದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು ಪರಿಣಾಮ 63 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎರಡು ಬಸ್‌ಗಳು ತ್ರಿಶೂಲಿ ನದಿಗೆ ಉರುಳಿ ಬಿದ್ದು 63 ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಮದನ್-ಆಶ್ರಿತ್ ಹೆದ್ದಾರಿಯ ನಾರಾಯಣಗಡ-ಮುಗ್ಲಿನ್ ರಸ್ತೆಯಲ್ಲಿ ಮುಂಜಾನೆ 3:30 ರ ಸುಮಾರಿಗೆ ಭೂ ಕುಸಿತ ಸಂಭವಿಸಿದೆ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಸುಗಳು ನದಿ ಪಾಲಾಗಿದೆ ಎನ್ನಲಾಗಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ,ಎರಡೂ ಬಸ್‌ಗಳಲ್ಲಿ ಬಸ್ ಚಾಲಕರು ಸೇರಿದಂತೆ ಒಟ್ಟು 63 ಮಂದಿ ಇದ್ದರು. ಬೆಳಗಿನ ಜಾವ 3:30ರ ಸುಮಾರಿಗೆ ಭೂಕುಸಿತದಿಂದ ಬಸ್‌ಗಳು ನದಿಪಾಲಾಗಿದೆ. ನಾಪತ್ತೆಯಾಗಿರುವ ಪ್ರಯಾಣಿಕರನ್ನು ಹುಡುಕಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ, ಆದರೆ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದಿದ್ದಾರೆ.
ಘಟನೆ ಸಂಬಂಧ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ದುಃಖವನ್ನು ವ್ಯಕ್ತಪಡಿಸಿದ್ದು ಶೀಘ್ರದಲ್ಲಿ ನಾಪತ್ತೆಯಾಗಿರುವವರ ರಕ್ಷಣೆ ನಡೆಸುವಂತೆ ಗೃಹ ಸಚಿವಾಲಯಕ್ಕೆ ಆದೇಶಿಸಿದ್ದು ರಕ್ಷಣೆಗೆ ಬೇಕಾಗಿರುವ ಅಗತ್ಯ ನೆರವು ನೀಡುವಂತೆ ಆದೇಶಿಸಿದ್ದಾರೆ. ರಕ್ಷಣಾ ತಂಡ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಯುತಿದ್ದು ಆದರೆ ಮಳೆಯಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎನ್ನಲಾಗಿದೆ.