ಡೈಲಿ ವಾರ್ತೆ: 15/ಜುಲೈ /2024

ಬ್ರಹ್ಮಾವರ: ವೈದ್ಯ ಡಾ. ಕೀರ್ತನ್ ಉಪಾಧ್ಯ ಅವರಿಂದ ದ್ವೇಷ ಟ್ವೀಟ್ : ಪ್ರಕರಣ ದಾಖಲು!

ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ಮಹೇಶ್ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯ ಡಾ. ಕೀರ್ತನ್ ಉಪಾಧ್ಯ ಅವರ ಎಕ್ಸ್ ಖಾತೆಯಿಂದ ಮಾಡಲಾಗಿದೆ ಎನ್ನಲಾದ ಟ್ವೀಟ್ ಒಂದು ವಿವಾದ ಸೃಷ್ಟಿಸಿದೆ.

ಜುಲೈ 13 ರಂದು ಎಕ್ಸ್ ನಲ್ಲಿ ಒಬ್ಬರು ” ಈ ಜಗತ್ತಿನಿಂದ ನೀವು ಏನಾದರೂ ಒಂದನ್ನು ಇಲ್ಲವಾಗಿಸಲು ಬಯಸುವುದಾದರೆ ಅದು ಯಾವುದು ? ” ಎಂದು ಕೇಳಿದ ಪ್ರಶ್ನೆಗೆ ಉತ್ತರವಾಗಿ ಉಡುಪಿಯ ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಕೀರ್ತನ್ ಉಪಾಧ್ಯ ಎಂಬವರು ” ಮುಸ್ಲಿಂ ಕಮ್ಯುನಿಟಿ ‘ ಎಂದು ಉತ್ತರಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ವೈದ್ಯ ಡಾ. ಕೀರ್ತನ್ ಮಾಡಿರುವ ವಿವಾದತ್ಮಕ ಟ್ವೀಟ್
ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನ ಇನ್ಚಾರ್ಜ್ ಆಗಿ ಕರ್ತವ್ಯವನ್ನು ನಿರ್ವಹಿಸಿಕೊಂಡಿದ್ದು ಪಿಎಸ್ಐ ಆಜ್ಮಲ್ ಇಬ್ರಾಹಿಂ ಅವರ ಗಮನಕ್ಕೆ ಬಂದಿದ್ದು ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಾಕಾರಿಯಾಗಿ ಮತ್ತು ಪ್ರಚೋದನಾಕಾರಿಯಾಗಿ ಕಾಮೆಂಟ್‌ ಮಾಡುವ ಮೂಲಕ ಧರ್ಮ-ಧರ್ಮಗಳ ನಡುವೆ ದ್ವೇಷವನ್ನುಂಟು ಮಾಡಿ, ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಲು ಪ್ರಯತ್ನಿಸಿದ ವೈದ್ಯ ಡಾ. ಕೀರ್ತನ್ ಉಪಾಧ್ಯ ವಿರುದ್ಧ ಕಾನೂನು ಕ್ರಮಕ್ಕೆ ದೂರು ದಾಖಲಿಸಿದ್ದಾರೆ.