ಡೈಲಿ ವಾರ್ತೆ: 15/ಜುಲೈ /2024

ಭಟ್ಕಳ: ಲೈಫ್ ಕೇರ್ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್, ಐಸಿಯು ಮತ್ತು ಮಾಡ್ಯುಲರ್ ಓಟಿ ಉದ್ಘಾಟನೆ

ಭಟ್ಕಳ: ಪಟ್ಟಣದ ಲೈಫ್ ಕೇರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್, ಐಸಿಯು, ಮತ್ತು ಆಪರೇಷನ್ ಥಿಯೇಟರ್ ನ್ನು ಜು. 13 ರಂದು ಶನಿವಾರ ಉದ್ಘಾಟಿಸಲಾಯಿತು.

ಇದರ ಉದ್ಘಾಟನೆಯನ್ನು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಉದ್ಘಾಟಿಸಿ ಅವರು ಮಾತನಾಡಿ ಇಲ್ಲಿನ ಅನಿವಾಸಿ ಭಾರತೀಯರು ಹೊರದೇಶದಲ್ಲಿ ಉದ್ಯಮ, ಉದ್ಯೋಗದಲ್ಲಿರುವವರು ಭಟ್ಕಳದಲ್ಲಿ ಸುಸಜ್ಜಿತ ಆಸ್ಪತ್ರೆ, ಉದ್ಯಮ ಸ್ಥಾಪಿಸಲು ಹಣ ವಿನಿಯೋಗ ಮಾಡಬೇಕು. ಲೈಪ್ ಕೇರ್ ಆಸ್ಪತ್ರೆ ಆರಂಭವಾಗಿ 4 ವರ್ಷದ ಬಳಿಕ ಅತ್ಯಾಧುನಿಕ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ. ಇದೀಗ ಆಸ್ಪತ್ರೆಯಲ್ಲಿ 50 ಬೆಡ್ ಸೇರಿದಂತೆ ಸುಸಜ್ಜಿತ ವ್ಯವಸ್ಥೆ ಇದ್ದು, ಮುಂದಿನ ದಿನಗಳಲ್ಲಿ ಇದು 200 ಬೆಡ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಆಸ್ಪತ್ರೆಯ ಅಭಿವೃದ್ಧಿಗೆ ಸರಕಾರದಿಂದಲೂ ಸಹ ಸಹಾಯ ಸಹಕಾರ ಮಾಡಲಾಗುವುದು ಎಂದರು.

ಮಂಗಳೂರು ರಾಜೀವ ಗಾಂಧಿ ಯೂನಿವರ್ಸಿಟಿಯ ಸೆನೆಟ್ ಸದಸ್ಯ ಡಾ. ಯು ಟಿ ಇಫ್ತಿಖಾರ್ ಅಲಿ ಮಾತನಾಡಿ, ಭಟ್ಕಳದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಅಗತ್ಯವಿದೆ. ಮೆಡಿಕಲ್ ಗೆ ಸಂಬಂಧಿಸಿದಂತೆ ಸಂಸ್ಥೆಗಳನ್ನು ಸ್ಥಾಪಿಸುವುದಿದ್ದಲ್ಲಿ ರಾಜೀವ ಗಾಂಧಿ ಯುನಿವರ್ಸಿಟಿ ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಿದ್ದು, ಭಟ್ಕಳದ ಲೈಪ್ ಕೇರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯ ಒದಗಿಸಿರುವುದು ಮತ್ತು ತಜ್ಞ ವೈದ್ಯರ ತಂಡ ಇರುವುದು ಜನತೆಗೆ ಅನುಕೂಲವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ಅಧ್ಯಕ್ಷ ಯೂನೂಸ್ ಖಾಜೀಯಾ, ಜನತೆಯ ಅನುಕೂಲಕ್ಕಾಗಿ ಲೈಪ್ ಕೇರ್ ಆಸ್ಪತ್ರೆಯನ್ನು ಲೈಪ್ ಕೇರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಇಲ್ಲಿ ತಜ್ಞ ವೈದ್ಯರು ಮತ್ತು ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆ ಇರುವುದರಿಂದ ಭಟ್ಕಳದ ಜನರು ಚಿಕತ್ಸೆಗಾಗಿ ಬೇರೆ ಊರಿಗೆ ಹೋಗುವುದು ತಪ್ಪಿದಂತಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಆಸ್ಪತ್ರೆಯಲ್ಲಿ ಮತ್ತಷ್ಟು ಬೆಡ್ ಹೆಚ್ಚಿಸುವುದರ ಜೊತೆಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದರು.

ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝೀ ಮೌಲನಾ ಅಬ್ದುಲ್ ರಬ್ ನದ್ವಿ, ಮರ್ಕಝಿ ಖಲಿಫಾ ಜಮಾಅತ್ ನ ಪ್ರಧಾನ ಖಾಝಿ ಮೌಲಾನಾ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ ಮಾತನಾಡಿದರು. ವೇದಿಕೆಯಲ್ಲಿ ಆಸ್ಪತ್ರೆಯ ನಿರ್ದೇಶಕ ಅಲ್ತಾಪ್ ಇದ್ದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಸಲ್ಮಾನ್ ಜುಬಾಪು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಜುಲ್ಫಿಖಾರ್ ಅಲಿ ಅತಿಥಿಗಳನ್ನು ಪರಿಚಯಿಸಿದರು.