ಡೈಲಿ ವಾರ್ತೆ: 17/ಜುಲೈ /2024

ಬಾಳೆಹೊನ್ನೂರು: ಚಲಿಸುವಾಗಲೇ ಕಳಿಚಿ ಬಿದ್ದ ಬಸ್ಸಿನ ಚಕ್ರಗಳು – ಅದೃಷ್ಟವಶಾತ್ ಪ್ರಯಾಣಿಕರು ಪಾರು!

ಚಿಕ್ಕಮಗಳೂರು: ಮಳೆಯಲ್ಲಿ ಸಂಚರಿಸುತ್ತಿದ್ದಾಗಲೇ ಬಸ್ಸಿನ ಚಕ್ರ ಕಳಚಿ ಬಿದ್ದ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರೋಟರಿ ಸರ್ಕಲ್‌ನಲ್ಲಿ ನಡೆದಿದೆ.

ಮಂಗಳವಾರ ರಾತ್ರಿ ಖಾಸಗಿ ಬಸ್ಸು ಬೆಂಗಳೂರಿನಿಂದ ಹೊರಟು ಶೃಂಗೇರಿಗೆ ಬರುತ್ತಿತ್ತು. ಬೆಳಗ್ಗೆ 5:18 ರ ವೇಳೆಗೆ ರೋಟರಿ ಸರ್ಕಲ್‌ನಲ್ಲಿ ಬಸ್ಸು ಸಂಚರಿಸುತ್ತಿದ್ದಾಗ ಹಿಂಬದಿಯ ಎರಡೂ ಚಕ್ರ ಕಳಚಿದೆ.

ಏಕಕಾಲಕ್ಕೆ ಬಸ್ಸಿನ ಎರಡು ಚಕ್ರಗಳು ಕಳಚಿ ಬೀಳುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಕ್ರ ಕಳಚುವ ಸಮಯದಲ್ಲಿ ಮಳೆ ಬರುತ್ತಿತ್ತು ಮತ್ತು ಬಸ್ಸು ನಿಧಾನವಾಗಿ ಸಂಚರಿಸುತ್ತಿತ್ತು.

ಒಂದು ವೇಳೆ ಘಾಟಿ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದರೆ ಮಹಾ ದುರಂತವೇ ನಡೆಯುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.