ಡೈಲಿ ವಾರ್ತೆ: 26/ಜುಲೈ /2024

ಪಾತ್ರೆ ಅಂಗಡಿಯಲ್ಲಿ ಸಿಲಿಂಡ‌ರ್ ಸ್ಫೋಟ: ವಸ್ತುಗಳೆಲ್ಲ ಚೆಲ್ಲಾಪಿಲ್ಲಿ ಅಪಾಯದಿಂದ ಮಗು ಪಾರು!

ಬೆಂಗಳೂರು ನಗರದ ಹುಳಿಮಾವು ಬಳಿಯ ಪಾತ್ರೆ ಅಂಗಡಿಯಲ್ಲಿ ಸಿಲಿಂಡ‌ರ್ ಸ್ಫೋಟಗೊಂಡಿದೆ.

ಸ್ಫೋಟದ ರಭಸಕ್ಕೆ 200 ಮೀಟರ್ ವ್ಯಾಪ್ತಿಯಲ್ಲಿರುವ ಮನೆ, ಅಂಗಡಿಗಳ ಕಿಟಕಿಗಳು ಒಡೆದಿದೆ. ನಿನ್ನೆ ರಾತ್ರಿ 10:55ಕ್ಕೆ ಸುರೇಶ್ ದಾಸ್ ಅವರ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ರಾಹುಲ್‌ ದಾಸ್‌ ಗಾಯಗೊಂಡಿದ್ದಾರೆ. ಅಂಗಡಿಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ರಸ್ತೆಯಲ್ಲಿ ನಿಲ್ಲಿಸಿದ್ದ ಎರಡು ಸ್ಕೂಟರ್‌ಗಳು ಸಂಪೂರ್ಣ ಜಖಂಗೊಂಡಿವೆ.
ಅಂಗಡಿಯಲ್ಲಿ ಅಕ್ರಮವಾಗಿ ಸಿಲಿಂಡರ್‌ ರೀಫಿಲಿಂಗ್‌ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಇದರಿಂದಾಗಿ ಅಂಗಡಿಯಲ್ಲಿ ಗ್ಯಾಸ್‌ ಸೋರಿಕೆಯಾಗಿದೆ. ಅಂಗಡಿಯ ಮುಂದೆ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಮಾಡುತ್ತಿತ್ತು. ಚಾರ್ಜರ್ ತೆಗೆದಾಗ ಸ್ಪಾರ್ಕ್ ರೂಪದಲ್ಲಿ ಸ್ಫೋಟಗೊಂಡಿದೆ ಎಂದು ನಂಬಲಾಗಿದೆ. ಸ್ಫೋಟದ ಭಯಾನಕ ದೃಶ್ಯವನ್ನು ವಿಡಿಯೋ ಕಣ್ಣಾವಲು ಸೆರೆಹಿಡಿಯಲಾಗಿದೆ.

ಸ್ಫೋಟ ಸಂಭವಿಸಿದ ಅಂಗಡಿಯ ಮುಂಭಾಗದಲ್ಲಿರುವ ಕಟ್ಟಡದ ಎರಡನೇ ಮಹಡಿಯ ಕಿಟಕಿ ಒಡೆದಿದ್ದು, ಅಲ್ಲಿ ಮಲಗಿದ್ದ ಒಂದು ತಿಂಗಳ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಹುಳಿಮಾವು ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.