ಡೈಲಿ ವಾರ್ತೆ: 03/ಆಗಸ್ಟ್/2024

ಆ. 7 ರಂದು ಕೋಟದಲ್ಲಿ ಐತಿಹಾಸಿಕ ಬೃಹತ್ ಉಪವಾಸ ಸತ್ಯಾಗೃಹ – ಹಕ್ಕೊತ್ತಾಯಗಳ ಕರಪತ್ರ ಬಿಡುಗಡೆ

ಕೋಟ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು, ಗಿಳಿಯಾರು, ಚಿತ್ರಪಾಡಿ, ಬನ್ನಾಡಿ, ಕಾರ್ಕಡ ಗ್ರಾಮದ ಕೃತಕ ನೆರೆ ಸಂತ್ರಸ್ತ ರೈತರ ಐತಿಹಾಸಿಕ ಬೃಹತ್ ಉಪವಾಸ ಸತ್ಯಾಗ್ರಹ ಹಾಗೂ ಹಕ್ಕೊತ್ತಾಯಗಳ ಕರಪತ್ರ ಬಿಡುಗಡೆ ಕಾರ್ಯಕ್ರಮವು ಆ.3 ರಂದು ಶನಿವಾರ ಬೆಳಿಗ್ಗೆ ಶ್ರೀ ಹಿರೇಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು.

ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ರೈತ ಧ್ವನಿ ಅಧ್ಯಕ್ಷರಾದ ಜಯರಾಮ್ ಶೆಟ್ಟಿ ಮಣೂರು ವಹಿಸಿದ್ದರು.ಅವರು ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ ಐತಿಹಾಸಿಕ ಬೃಹತ್ ಉಪವಾಸ ಸತ್ಯಾಗ್ರಹದ ಕರಪತ್ರವನ್ನು ಇಂದು ಬಿಡುಗಡೆ ಮಾಡಿದ್ದೇವೆ. ಇದರ ಉದ್ದೇಶ ತೆಕ್ಕಟ್ಟೆ ಯಿಂದ ಕಾರ್ಕಡದ ವರೆಗೆ ಕೃತಕ ನೆರೆಯಿಂದಾಗಿ ರೈತ ಬೆಳೆದ ಕೃಷಿ ಕೊಳೆತು ನಾರುವ ಪರಿಸ್ಥಿತಿ ಬಂದಿದೆ. ಇದಕ್ಕೆ ಶಾಶ್ವತ ಪರಿಹಾರಕ್ಕೆ ಈ ಹಿಂದೆ ಹಲವು ಬಾರಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಅವರ ಪ್ರಯತ್ನ ರೈತರಿಗೆ ಫಲದಾಯಕವಾಗದ ಕಾರಣ ಆ. 7 ರಂದು ಬುಧವಾರ ಬೆಳಿಗ್ಗೆ ಕೋಟ ಶ್ರೀ ಹಿರೇಮಹಾಲಿಂಗೇಶ್ವರ ದೇವಾಲಯ ಜಾತ್ರಾ ಮೈದಾನದಲ್ಲಿ ಸಾವಿರಾರು ರೈತರು ಸೇರಿ ಸಾಂಕೇತಿಕವಾಗಿ
ಉಪವಾಸ ಸತ್ಯಾಗ್ರಹವನ್ನು ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಈ ಮನವಿಗೆ ಸ್ಪಂದಿಸಿ, ಸ್ಥಳೀಯಾಡಳಿತವಾಗಲಿ, ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಸಹಕಾರ ಮಾಡಿ ರೈತಕೂಗನ್ನು ಆಲಿಸಿ ಕೃಷಿಯನ್ನು ಮಾಡಲು ಅವಕಾಶ ಮಾಡಿಕೊಟ್ಟಲ್ಲಿ ನಾವು ಸ್ವಾಗತಿಸುತ್ತೇವೆ. ಒಂದು ವೇಳೆ ಇದು ಫಲಿಸದಿದ್ದರೆ ಮುಂದೆ ಉಗ್ರ ಹೋರಾಟವನ್ನು ಮಾಡಲಿದ್ದೇವೆ ಎಂದು ಅಧ್ಯಕ್ಷ ಜಯರಾಮ್ ಶೆಟ್ಟಿ ಹೇಳಿದರು.

ರೈತರ ಹಕ್ಕೊತ್ತಾಯಗಳು:
ತೆಕ್ಕಟ್ಟೆ ಗ್ರಾಮದ ಮಲ್ಯಾಡಿಯಿಂದ ನಾಗರಮಠ ಚೆಕ್ ಡ್ಯಾಮ್ ವರೆಗೆ ಹೊಳೆಯ ನದಿಪಾತ್ರ ಗುರುತಿಸಿ ಅದರ ಹೂಳು ತೆಗೆಯಬೇಕು,
➤ ಕೋಟ – ಸೈಬ್ರಾಕಟ್ಟೆರಸ್ತೆ ಮತ್ತು ಬೈಕೂರು ಬೈಲು ಎಂಬಲ್ಲಿ ಈಗಿರುವ ಅತೀ ಕಡಿಮೆ ವ್ಯಾಸದ ತೂಬು ಸೇತುವೆಗಳನ್ನು ತೆಗೆದು ಪಿಲ್ಲರ್ ಸೇತುವೆಗಳನ್ನು ನಿರ್ಮಾಣ ಮಾಡಬೇಕು,
➤ ಕಾರ್ಕಡ ಗ್ರಾಮದ ಕುದುರು ಮನೆ ಡ್ಯಾಮ್ ಮತ್ತು ಹೊಸಳ ಗ್ರಾಮದ ನಾಗರಮಠ ಚೆಕ್ ಡ್ಯಾಮ ಗಳಿಗೆ ಅಳವಡಿಸಿರುವ ಹಲಗೆಗಳನ್ನು ಸಂಪೂರ್ಣವಾಗಿ ತೆರವು ಮಾಡಬೇಕು.
➤ ಈ ಭಾಗದಲ್ಲಿ ಉಂಟಾಗುತ್ತಿರುವ ಕೃತಕ ನೆರೆ ಪರಿಹಾರಕ್ಕೆ ಪರಿಣತ ತಂತ್ರಜ್ಞರ ತಂಡದಿಂದ ಸರ್ವೆ ನಡೆಸಿ ಕಾಲಮಿತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು.
➤ ಕೃತಕ ನೆರೆಯಿಂದ ಕೃಷಿ ನಷ್ಟ ಹೊಂದಿದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಕೀಲರು ಟಿ ಮಂಜುನಾಥ್,ಆರ್ ಟಿ ಐ ಕಾರ್ಯಕರ್ತ ನಾಗರಾಜ್ ಗಾಣಿಗ, ಉದ್ಯಮಿ ಸುಭಾಸ್ ಹಂಡಿಕೆರೆ, ಬೋಜು ಪೂಜಾರಿ ಗಿಳಿಯಾರು, ಹಂಡಿಕೆರೆ ರಾಘು ಶೆಟ್ಟಿ, ಸಿದ್ದ ದೇವಾಡಿಗ ಹರ್ತಟ್ಟು, ಚಂದ್ರ ಹಾಡಿಕೆರೆ, ತಿಮ್ಮ ಕಾಂಚನ್ ಹರ್ತಟ್ಟು, ನಿತ್ಯಾ ಶೆಟ್ಟಿ ಹರ್ತಟ್ಟು, ರಮೇಶ್ ಮೆಂಡನ್ ಸಾಲಿಗ್ರಾಮ, ಮಹಾಬಲ ಪೂಜಾರಿ ಹರ್ತಟ್ಟು, ಮಹೇಶ್ ಶೆಟ್ಟಿ ದ್ಯಾವುಸ, ಗಿರೀಶ್ ದೇವಾಡಿಗ ಹರ್ತಟ್ಟು, ಗಿರೀಶ್ ನಾಯ್ಕ್ ಕೋಟ, ಭಾಸ್ಕರ್ ಶೆಟ್ಟಿ ಮಣೂರು ಪಡುಕರೆ, ಸುರೇಶ್ ಪೂಜಾರಿ ಹರ್ತಟ್ಟು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕೀರ್ತಿಶ್ ಪೂಜಾರಿ ಕೋಟ ಸ್ವಾಗತಿಸಿ, ವಂದಿಸಿದರು.