ಡೈಲಿ ವಾರ್ತೆ: 07/ಆಗಸ್ಟ್/2024

ನೆಲಮಂಗಲ: ಟಿಪ್ಪರ್ ಡಿಕ್ಕಿಯಾಗಿ ಸ್ಕೂಟರ್ ಹಿಂಬದಿ ಕುಳಿತಿದ್ದ ಗರ್ಭಿಣಿ ದುರ್ಮರಣ

ಬೆಂಗಳೂರು: ಟಿಪ್ಪರ್ ಡಿಕ್ಕಿಯಾಗಿ ಸ್ಕೂಟರ್ ಹಿಂಬದಿ ಕುಳಿತಿದ್ದ ಗರ್ಭಿಣಿ ಮೃತಪಟ್ಟ ಘಟನೆ ನೆಲಮಂಗಲ ತಾಲೂಕಿನ ಎಡೇಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.

ಮೃತದುರ್ದೈವಿ ಎಡೇಹಳ್ಳಿಯ ಸಿಂಚನಾ (30) ಎಂದು ಗುರುತಿಸಲಾಗಿದೆ
ಮೃತ ಸಿಂಚನಾ ಪತಿ ಮಂಜುನಾಥ್ ಪವಾಡ ಸದೃಶ ರೀತಿಯಲ್ಲಿ ​ಪಾರಾಗಿದ್ದಾರೆ. ಅಪಘಾತದ ಬಳಿಕ ಸ್ಥಳದಲ್ಲೇ ಟಿಪ್ಪರ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ.

ಸಿಂಚನಾ ಅವರಿಗೆ ಆಗಸ್ಟ್​ 17ಕ್ಕೆ 8 ಮುಗಿದು 9 ತಿಂಗಳು ತುಂಬುತ್ತಿತ್ತು. ಹೀಗಾಗಿ ಹೆರಿಗೆ ಸುಸೂತ್ರವಾಗಿ ಆಗಲಿ ಎಂದು ದಂಪತಿ ಸ್ಕೂಟರ್ ನಲ್ಲಿ​​ ದಾಬಸ್​ ಪೇಟೆಯಲ್ಲಿರುವ ಶಿವಗಂಗೆಯ ಗಣಪತಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಪೂಜೆ ಸಲ್ಲಿಸಿ ಮರಳಿ ತಮ್ಮೂರು ತೋಟನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟಿಪ್ಪರ್​ ಡಿಕ್ಕಿ ಹೊಡೆದಿದೆ. ಆಗ ಸಿಂಚನಾ ಸ್ಕೂಟರ್ ನಿಂದ ಕೆಳೆಗೆ ಬಿದ್ದಿದ್ದಾರೆ. ಬಳಿಕ ಟಿಪ್ಪರ್ ​ಸಿಂಚನಾ ಮೇಲೆ ಹರಿದ ಪರಿಣಾಮ ಹೊಟ್ಟೆಯಲ್ಲಿದ್ದ 8 ತಿಂಗಳು ಮಗು ಹೊರಗೆ ಬಂದಿದೆ. ನಡು ರಸ್ತೆಯಲ್ಲೇ ಮಗು ವಿಲ ವಿಲ ಒದ್ದಾಡಿ ಮೃತಪಟ್ಟಿದೆ. ಮನಕಲಕುವ ಘಟನೆ ಕಂಡು ಸ್ಥಳೀಯರು ಕೂಡ ಕಣ್ಣೀರು ಹಾಕಿದ್ದಾರೆ.

ಮೃತ ದೇಹದ ಮುಂದೆ ಪತಿ ಮಂಜುನಾಥ್​​ ಹಾಗೂ ಅತ್ತೆಯ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಅಸ್ಪತ್ರೆಗೆ ಮೃತದೇಹದ ರವಾನೆ ಮಾಡಲಾಗಿದೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.