ಡೈಲಿ ವಾರ್ತೆ: 13/ಆಗಸ್ಟ್/2024

ಬೆಳಗಾವಿಯಲ್ಲಿ ಬೋರ್‌ವೆಲ್‌ ನೀರು ಸೇವಿಸಿ 41 ಜನ ಅಸ್ವಸ್ಥ

ಬೆಳಗಾವಿ: ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಆರಂಭವಾದ ವಾಂತಿ – ಭೇದಿ ಉಲ್ಬಣಗೊಂಡಿದೆ. ಒಂದೇ ದಿನ 41 ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ತೀವ್ರ ಅಸ್ವಸ್ಥರಾದ ಮೂವರನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ಮೂವರನ್ನು ಬೈಲಹೊಂಗಲ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿತ್ರಾಣಗೊಂಡಿರುವ ಈರವ್ವ ಗಾಳಿಮಠ (63) ಅವರನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ಸೇರಿಸಲಾಗಿದೆ. ಇನ್ನಿಬ್ಬರು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಉಳಿದವರು ಚಚಡಿ ಹಾಗೂ ಇಂಚಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಕೋಣಿ ಭೇಟಿ ನೀಡಿ ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಿದರು.
ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿ ಕಾಣಿಸಿಕೊಂಡಿದೆ. ಪ್ರಾಣಾಪಾಯ ಆಗಿಲ್ಲ. ನಿತ್ರಾಣಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರಿಸಲಾಗಿದೆ. ಗ್ರಾಮದಲ್ಲಿ ನಾಲ್ವರು ವೈದ್ಯರು ಹಾಗೂ ಹಲವು ವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲೇ ಇದ್ದಾರೆ. ನೀರನ್ನು ಕುದಿಸಿ 90% ಕುಡಿಯುವಂತೆ ಜಾಗೃತಿ ವಹಿಸಲಾಗಿದೆ. ಸವದತ್ತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಯಶವಂತ ಕುಮಾರ್‌ ಮಾತನಾಡಿ, ಸಮಸ್ಯೆ ಉಲ್ಬಣವಾಗುತ್ತಿದ್ದಂತೆ ಎಚ್ಚರಿಕೆ ಕ್ರಮವಹಿಸಲಾಗಿದೆ. ಬೋರ್‌ವೆಲ್‌ಗಳ ಗ್ರಾಮದ ನೀರನ್ನು ತಪಾಸಣೆಗೆ ಕಳಿಸಲಾಗಿದೆ. ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗಿದೆ. ಓವರ್‌ಹೆಡ್ ಟ್ಯಾಂಕಿನಿಂದ ನೀರು ಸ್ಥಗಿತ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಗ್ರಾಮದ ಬೋರ್‌ವೆಲ್‌ಗಳ ಮೂಲಕ ಓವರ್‌ಹೆಡ್‌ ಟ್ಯಾಂಕ್‌ಗೆ ನೀರು ತುಂಬಿಸಲಾಗುತ್ತದೆ. ಅಲ್ಲಿಂದ ಮನೆ-ಮನೆಗೆ ನಳಗಳ ಮೂಲಕ ಹರಿಸಲಾಗುತ್ತದೆ. ಮನೆಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ನಲ್ಲಿ ಚರಂಡಿ ನೀರು ಸೇರಿಕೊಂಡಿದ್ದರಿಂದ ಈಗ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸದ್ಯ ವೀರಭದ್ರೇಶ್ವರ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಸಮಸ್ಯೆ ಉಲ್ಬಣವಾಗಿದೆ. ಇಡೀ ಊರಿಗೆ ಹಬ್ಬುವ ಮುನ್ನವೇ ಕ್ರಮ ವಹಿಸಬೇಕು ಎಂದೂ ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಟ್ಯಾಂಕನ್ನು ಸಂಪೂರ್ಣ ಖಾಲಿ ಮಾಡಿ, ಒಣಗಿಸಿ ಮತ್ತೆ ನೀರು ಭರ್ತಿ ಮಾಡಲಾಗುವುದು. ಆ ನೀರನ್ನು ಕೂಡ ನಳಗಳ ಮೂಲಕ ಹರಿಬಿಟ್ಟು ಮತ್ತೆ ಟ್ಯಾಂಕ್ ಖಾಲಿ ಮಾಡಲಾಗುವುದು. ಇದರಿಂದ ಟ್ಯಾಂಕ್ ಅಥವಾ ನಳಗಳಲ್ಲಿ ಎಲ್ಲಿಯೇ ಮಲಿನ ನೀರು ಸೇರಿಕೊಂಡಿದ್ದರೂ ಸ್ವಚ್ಛವಾಗುತ್ತದೆ. ಮತ್ತೊಮ್ಮೆ ತಪಾಸಣೆ ಮಾಡಿದ ಬಳಿಕ ನೀರು ಪೂರೈಸಲಾಗುವುದು. ಕುಡಿಯುವ ನೀರಿನ ಬವಣೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ತಿಳಿಸಿದ್ದಾರೆ.

ಗ್ರಾಮದಲ್ಲಿ ಪಿಡಿಒ ನಿರ್ಲಕ್ಷ್ಯ ವಹಿಸಿದ್ದರಿಂದ ಸಮಸ್ಯೆ ಉಲ್ಬಣವಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳು ಇದ್ದರೂ ಅವುಗಳನ್ನ ಸರಿಯಾಗಿ ನಿರ್ವಹಣೆ ಮಾಡಿಲ್ಲ. ವಾಂತಿ-ಭೇದಿ ಸಮಸ್ಯೆ ಸಣ್ಣದು ಇದ್ದಾಗಲೇ ಎಚ್ಚೆತ್ತುಕೊಂಡಿಲ್ಲ ಎಂದು ದೂರಲಾಗಿದೆ.