ಡೈಲಿ ವಾರ್ತೆ: 01/OCT/2024

ನಿರ್ಜನ ಪ್ರದೇಶದಲ್ಲಿ ಮಗು ಅಳುವ ಶಬ್ಧ – ಜೀವಂತವಾಗಿ ಅರ್ಧ ಸಮಾಧಿ ಮಾಡಿದ್ದ ನವಜಾತ ಶಿಶು!

ಬೆಂಗಳೂರು: ನಿರ್ಜನ ಪ್ರದೇಶವೊಂದರಲ್ಲಿ ಮಗುವಿನ ಅಳುವ ಶಬ್ಧವನ್ನು ಕೇಳಿಸಿಕೊಂಡು ಜನರು ಶಬ್ಧದ ದಿಕ್ಕಿನೆಡೆಗೆ ನಡೆದಾಗ ಅಕ್ಷರಶಃ ಆಘಾತವಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕತ್ರಿಗುಪ್ಪೆ ದಿನ್ನೆ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಮಗು ಅಳುವ ಶಬ್ಧವನ್ನು ಹುಡುಕಿ ಬಂದ ಜನರಿಗೆ ಕಣ್ಣಿಗೆ ಕಂಡಿದ್ದು ಗುಂಡಿಯೊಂದರಲ್ಲಿ ಜೀವಂತವಾಗಿ ಅರ್ಧ ಸಮಾಧಿ ಮಾಡಿದ್ದ ನವಜಾತ ಶಿಶು. ಅದನ್ನು ನೋಡಿದ ಜನರ ಎದೆ ಒಮ್ಮೆ ಝಲ್​ ಎಂದಿದೆ. ಕೂಡಲೇ ಮಗುವನ್ನು ರಕ್ಷಣೆ ಮಾಡಿ, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಆರೋಪಿಗಳು ಮಗುವನ್ನು ಕಡಿಮೆ ಜನ ಓಡಾಟ ಇರುವ ಸಂದರ್ಭ ಕತ್ತಲಲ್ಲಿ ಹೂತು ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇದೀಗ ಮಗುವನ್ನು ಚಿಕಿತ್ಸೆಗಾಗಿ ದೊಮ್ಮಸಂದ್ರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಮಯಕ್ಕೆ ಸರಿಯಾಗಿ ಮಗುವನ್ನು ರಕ್ಷಿಸಲಾಗಿದೆ. ಮಗುವಿನ ದೇಹದಲ್ಲಿ ಸಣ್ಣಪುಟ್ಟ ಗಾಯಗಳು ಕಂಡು ಬಂದಿದ್ದು, ಚೇತರಿಸಿಕೊಳ್ಳುತ್ತಿದೆ ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಪಿಗಳ ಸುಳಿವಿಗಾಗಿ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿಗಳು ಸ್ಥಳೀಯರಲ್ಲ ಎಂದು ತೋರುತ್ತದೆ, ಸಿಕ್ಕಿಬೀಳುವ ಆತಂಕದಲ್ಲಿ ಮಗುನನ್ನು ಅವಸರದಲ್ಲಿ ಹೂತುಹಾಕಿದ್ದಾರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಕರಣ ಸಂಬಂದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.