ಡೈಲಿ ವಾರ್ತೆ: 03/OCT/2024

ಮೆಲ್ಕಾರ್ – ಮುಡಿಪು ರಾಜ್ಯ ಹೆದ್ದಾರಿಯಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತ್ಯು

ಬಂಟ್ವಾಳ : ಮೆಲ್ಕಾರ್ – ಮುಡಿಪು ರಾಜ್ಯ ಹೆದ್ದಾರಿಯ ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ಬುಧವಾರ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ‌ಘಟನೆ ಇಂದು ನಡೆದಿದೆ.

ಬರಿಮಾರು ನಿವಾಸಿ ಸರ್ಪಾಝ್ ( 33) ಮೃತಪಟ್ಟ ವ್ಯಕ್ತಿಯಾಗಿದ್ದು, ಸಹಸವಾರಿಣಿ ವಿದ್ಯಾರ್ಥಿ ಜಾಸ್ಮೀನ್ ( 18) ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಸರ್ಪಾಝ್ ಅವರು ತಂಗಿಯನ್ನು ದೇರಳಕಟ್ಟೆ ಕಾಲೇಜಿಗೆ ಸ್ಕೂಟರ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಮೆಲ್ಕಾರ್ ನಿಂದ ಮುಡಿಪು ಮಾರ್ಗವಾಗಿ ಮಾರ್ನಬೈಲು ತಲುಪಿದಾಗ ಎದುರಿನಿಂದ ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ಇಮ್ತಿಯಾಜ್ ಎಂಬಾತ ಇವರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿ ರಭಸಕ್ಕೆ ಸ್ಕೂಟರ್ ಸವಾರ ಹಾಗೂ ಸಹ ಸವಾರಿಣಿ(ಅಣ್ಣ ತಂಗಿ) ಇಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ‌ಗಾಯಗೊಂಡಿದ್ದರು. ತಕ್ಷಣ ಇಬ್ಬರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಗಂಭೀರವಾಗಿ ಗಾಯಗೊಂಡಿದ್ದ ಸರ್ಪಾಝ್ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.