ಡೈಲಿ ವಾರ್ತೆ: 06/OCT/2024

ಬ್ರಹ್ಮಾವರ: ತಂದೆ ನೇಣು ಬಿಗಿದು ಆತ್ಮಹತ್ಯೆ – ಸ್ವಾಭಾವಿಕ ಸಾವು ಎಂದು ಮಗನಿಂದ ಅಂತ್ಯಕ್ರಿಯೆ – ಪ್ರಕರಣ ದಾಖಲು

ಬ್ರಹ್ಮಾವರ: ತಂದೆಯ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿಟ್ಟು, ಶವ ದಹನ ಮಾಡಿದ ಪುತ್ರನ ವಿರುದ್ಧ ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ವಿವರ : ಬ್ರಹ್ಮಾವರ ತಾಲೂಕು ಕುದಿ ಗ್ರಾಮದ ಬಿಯಾಳಿಯ ಹೊಸಗುಮ್ಮ ಎಂಬಲ್ಲಿನ ನಿವಾಸಿ ಸುಬ್ರಾಯ ನಾಯ್ಕ ಎಂಬವರು ಮಾನಸಿಕ ಕಾಯಿಲೆಯಿಂದ ಬಳಳುತ್ತಿದ್ದರು. ಇದೇ ಕಾರಣದಿಂದ ಅವರು ಸೆ. 27ರಂದು ಅವರ ಗದ್ದೆ ಬಳಿಯ ಸೀತಾನದಿಗೆ ಅಳವಡಿಸಿದ್ದ ಮೋಟಾರ್ ಶೆಡ್ ಸಮೀಪದ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಹಿರಿಯ ಪುತ್ರ ಸೀತಾರಾಮ ನಾಯ್ಕರಿಗೆ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಸ್ವಾಭಾವಿಕ ಸಾವಲ್ಲ ಎಂಬ ಸಂಪೂರ್ಣ ಅರಿವಿತ್ತು. ಆದರೂ ಅವರು ಈ ಬಗ್ಗೆ ಪೊಲೀಸರಿಗಾಗಲಿ ಅಥವಾ ಸಂಬಂಧಿತ ಇಲಾಖೆಗಾಗಲಿ ತಿಳಿಸದೇ ಅಂದೇ ಸಂಜೆ 6 ಗಂಟೆಗೆ ತಂದೆಯ ಶವವನ್ನು ದಹನ ಮಾಡಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಖಚಿತಪಡಿಸಿಕೊಂಡು ನ್ಯಾಯಾಲಕ್ಕೆ ಮಾಹಿತಿ ನೀಡಿದ್ದಾರೆ. ನ್ಯಾಯಾಲಯದ ಅನುಮತಿಯಂತೆ ಇದೀಗ ಸೀತಾರಾಮ ನಾಯ್ಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆದಿದೆ.