ಡೈಲಿ ವಾರ್ತೆ: 15/OCT/2024

ಕೋಟ: ಕಾರು ಹಾಗೂ ಕೆಎಸ್ಆರ್ ಟಿಸಿ ವೋಲ್ವೋ ಬಸ್ ನಡುವೆ ಅಪಘಾತ – ಓರ್ವ ಗಂಭೀರ ಗಾಯ

ಕೋಟ: ಕಾರು ಹಾಗೂ ಕೆಎಸ್ಆರ್ ಟಿಸಿ ವೋಲ್ವೋ ಬಸ್ ನಡುವೆ ನಡೆದ ಅಪಘಾತದಲ್ಲಿ ಓರ್ವ ಗಂಭೀರ ಗಾಯಗೊಂಡ ಘಟನೆ ಅ. 15 ರಂದು ಮಂಗಳವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 66 ರ ಕೋಟ ಮಣೂರು ರಾಜಲಕ್ಷ್ಮಿ ಹಾಲ್ ಬಳಿ ನಡೆದಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ ಉಡುಪಿ ಮೂಲದ ಗೌತಮ್ ಪಿ ಪ್ರಭು (35) ಎಂದು ಗುರುತಿಸಲಾಗಿದೆ.

ಗೌತಮ್ ಅವರು ತನ್ನ ಇನ್ನೋವಾ ಕಾರಿನಲ್ಲಿ ಗಂಗೊಳ್ಳಿಯಿಂದ ಉಡುಪಿ ಕಡೆ ಹೋಗುತ್ತಿದ್ದ ವೇಳೆ ಕೋಟ ಮಣೂರು ಸಮೀಪ ಅದೇ ದಾರಿಯಲ್ಲಿ ಮುಂಬೈಯಿಂದ ಮಂಗಳೂರು ಹೋಗುತ್ತಿದ್ದ ಕೆಎಸ್ಆರ್ ಟಿಸಿ ವೋಲ್ವೋ ಬಸ್ ಹಿಂದಿನಿಂದ ಬಂದು ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬಸ್ ಕಾರಿಗೆ ಟಚ್ ಆಗಿದ್ದು ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್ ನಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಜಖಂ ಗೊಂಡಿದೆ.

ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗೌತಮ್ ಪಿ ಪ್ರಭು ಅವರಿಗೆ ಗಂಭೀರ ಗಾಯವಾಗಿದ್ದು ತಕ್ಷಣ ಸ್ಥಳೀಯರು ಸೇರಿ ಆಸ್ಪತ್ರೆಗೆ ಸಾಗಿಸಿರುತ್ತಾರೆ.

ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.