ಡೈಲಿ ವಾರ್ತೆ: 19/OCT/2024

ವರದಿ: ಅಬ್ದುಲ್ ರಶೀದ್ ಮಣಿಪಾಲ

ಮಣಿಪಾಲ ಆಟೋ ರಿಕ್ಷಾ ಚಾಲಕನ ಪ್ರಾಮಾಣಿಕತೆ – ಪ್ರಯಾಣಿಕರ ಮೊಬೈಲ್, ಹಣ ಮರಳಿಸಿದ ವಿಜಯ ಪುತ್ರನ್ ಹಿರೇಬೆಟ್ಟು

ಮಣಿಪಾಲ: ಆಟೋ ರಿಕ್ಷಾದಲ್ಲಿ ಪ್ರಯಾಣಿಕರು ಮರೆತು ಬಿಟ್ಟು ಹೋದ ಮೊಬೈಲ್ ಹಾಗೂ ಹಣವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಅ. 19 ರಂದು ಮಣಿಪಾಲದಲ್ಲಿ ನಡೆದಿದೆ.

ಆಟೋ ಚಾಲಕರು ಎಂದರೇ ಸ್ವಲ್ಪ ದೂರ ಸಂಚಾರ ಮಾಡಲು ಸಾಕಷ್ಟು ದುಡ್ಡು ಕೇಳುತ್ತಾರೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವುದು ಸಹಜ. ಆದರೆ ಖಾಕಿ ತೊಟ್ಟು ಆಟೋ ಚಾಲನೆ ಮಾಡುವ ಚಾಲಕರಲ್ಲಿಯೂ ಒಬ್ಬ ಸಹೃದಯಿ ಸೇವಕ ಇರುತ್ತಾನೆ ಎಂಬ ಮಾತು ಸಹ ಅಕ್ಷರಶಃ ಸತ್ಯ.

ಅದೇ ರೀತಿ ಮಣಿಪಾಲ ಕೆನರಾ ಬ್ಯಾಂಕ್ ಮ್ಯಾನೇಜ್ ಮೆಂಟ್ ಕಾಲೇಜು (ಎಸ್.ಐ.ಬಿ.ಎಂ.) ಆಟೋ ನಿಲ್ದಾಣದಿಂದ ರೈಲ್ವೆ ಸ್ಟೇಷನ್ ಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುವ ವೇಳೆ ಕೇರಳದ ಪ್ರಯಾಣಿಕರು ಆಟೋ ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ 35 ಸಾವಿರ ರೂ. ಬೆಲೆಯ ಮೊಬೈಲ್ ಹಾಗೂ ನಗದು 3000 ರೂಪಾಯಿಯನ್ನು ಪ್ರಾಮಾಣಿಕತೆಯಿಂದ ಮರಳಿಸುವ ಮೂಲಕ ಆಟೋ ಚಾಲಕ ವಿಜಯ ಪುತ್ರನ್ ಹಿರೇಬೆಟ್ಟು ಎಲ್ಲರ ಪ್ರೀತಿ ಪ್ರಶಂಸೆ ಪಾತ್ರರಾಗಿದಾರೆ.

ವಿಜಯ ಪುತ್ರನ್ ಹಿರೇಬೆಟ್ಟು ಅವರು ಮಣಿಪಾಲ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದರೆ.