ಡೈಲಿ ವಾರ್ತೆ: 06/ಫೆ. /2025

ಬೊಲೆರೊಗೆ ಡಿಕ್ಕಿ ಹೊಡೆದು ಡಿವೈಡರ್‌ಗೆ ಗುದ್ದಿದ ಲಾರಿ: ಚಾಲಕ ಸ್ಥಳದಲ್ಲಿಯೇ ಸಾವು, ರಸ್ತೆ ತುಂಬಾ ದಾಳಿಂಬೆ!

ವಿಜಯನಗರ: ದಾಳಿಂಬೆ ತುಂಬಿದ್ದ ಲಾರಿಯೊಂದು ಅತಿವೇಗವಾಗಿ ಬಂದು ಬೊಲೆರೊಗೆ ಹಿಂದಿನಿಂದ ಡಿಕ್ಕಿ ಹೊಡೆದು ಡಿವೈಡರ್‌ಗೆ ಗುದ್ದಿದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆ ಮರಿಯಮ್ಮನಹಳ್ಳಿ ಹತ್ತಿರದ ಹೆದ್ದಾರಿ -50ರ ತಿಮ್ಮಲಾಪುರ ಟೋಲ್‌ನಲ್ಲಿ ಬುಧವಾರ ಸಂಜೆ ನಡೆದಿದೆ.

ಘಟನೆಯಲ್ಲಿ ಲಾರಿ ಕ್ಲೀನರ್ ತೀವ್ರ ಗಾಯಗೊಂಡಿದ್ದಾರೆ ಎಂದು ಘಟನೆ ಬಗ್ಗೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಬಸವನಬಾಗೇವಾಡಿಯ ಲಾರಿ ಚಾಲಕ ಈರಣ್ಣ ಬಾಗಿ(37) ಮೃತಪಟ್ಟವರು. ಕ್ಲೀನರ್ ಶ್ರೀಶೈಲ ತೀವ್ರ ಗಾಯಗೊಂಡಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್ಪಿ ಅವರು ಸಂದೇಶದ ಮೂಲಕ ತಿಳಿಸಿದ್ದಾರೆ. ಆಲಮಟ್ಟಿಯಿಂದ ಮೈಸೂರಿಗೆ ದಾಳಿಂಬೆ ತುಂಬಿ ತೆರಳುತ್ತಿದ್ದ ಲಾರಿ ಟೋಲ್‌ನಲ್ಲಿ ಅತಿವೇಗವಾಗಿ ಬಂದು, ಮೊದಲು ಟೋಲ್‌ನಲ್ಲಿ ಹಣ ಪಾವತಿಸುತ್ತಿದ್ದ ಬೊಲೆರೊಗೆ ಡಿಕ್ಕಿ ಹೊಡೆದು, ನಂತರ ಟೋಲ್ ರೂಮ್ ಪಕ್ಕದ ಡಿವೈಡರ್‌ಗೆ ಗುದ್ದಿದೆ.
ಲಾರಿ ಡಿಕ್ಕಿ ಹೊಡೆತದ ರಭಸಕ್ಕೆ ಬೊಲೆರೊ ಪಲ್ಟಿ ಹೊಡೆದಿದ್ದು, ಇದರೊಳಗಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಸಿಸಿ ಟಿವಿಯಲ್ಲಿ ಘಟನೆಯ ವಿಡಿಯೋ ಸೆರೆಯಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.