

ಡೈಲಿ ವಾರ್ತೆ: 08/ಫೆ. /2025


ಬೈಕ್ಗೆ ಲಾರಿ ಡಿಕ್ಕಿ – ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

ಕಾಸರಗೋಡು: ಬೈಕ್ ಹಾಗೂ ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟ ಘಟನೆ ಕಾಞಂಗಾಡ್ -ಪಡನ್ನಕ್ಕಾಡ್ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಬೈಕ್ ಪ್ರಯಾಣಿಕರಾದ ಕಾಞಂಗಾಡ್ ನಿವಾಸಿ ಆಶಿಖ್(20), ಮೀನಾಪೀಸ್ ಕೋಟಾದಲ್ಲಿ ವಾಸಿಸುವ ಬೆಂಗಳೂರು ನಿವಾಸಿ ತನ್ವೀರ್(35) ಮೃತಪಟ್ಟವರು. ನೀಲೇಶ್ವರ ಭಾಗದಿಂದ ಬಂದ ಲಾರಿ ಬೈಕಿಗೂ ನಿಲ್ಲಿಸಿದ್ದ ಮತ್ತೊಂದು ಲಾರಿಗೂ ಢಿಕ್ಕಿ ಹೊಡೆದಿದೆ. ನಿಲ್ಲಿಸಿದ್ದ ಲಾರಿಯ ಮುಂಭಾಗದಲ್ಲಿ ಯುವಕರು ಪ್ರಯಾಣಿಸುತ್ತಿದ್ದ ಬೈಕ್ ಹೋಟೆಲಿನತ್ತ ತಿರುಗಿಸುವಾಗ ಅಮಿತ ವೇಗದಿಂದ ಬಂದ ಲಾರಿ ಢಿಕ್ಕಿ ಹೊಡೆದಿದೆ. ಎರಡು ಲಾರಿಗಳ ನಡುವೆ ಸಿಲುಕಿದ ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.