*ಡೈಲಿ ವಾರ್ತೆ: 27/ಫೆ. /2025*

ಉಡುಪಿ ಸಿಟಿ ಸೆಂಟರ್ ಸಿಬ್ಬಂದಿಗಳಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಪ್ರಕರಣ ದಾಖಲು

ಉಡುಪಿ: ನಗರದ ಸಿಟಿ ಸೆಂಟರ್ ನ ಸಿಬ್ಬಂದಿಗಳು ಕ್ಷುಲ್ಲಕ ಕಾರಣವನ್ನೇ ಮುಂದೆ ಮಾಡಿ ವಿದ್ಯಾರ್ಥಿಗಳಿಬ್ಬರನ್ನು ಥಳಿಸಿದ ಘಟನೆ ಫೆ. 27 ರ ಗುರುವಾರ ನಡೆದಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿಗಳು ನಿಹಾಲ್ (17) ಹಾಗೂ ಪೈಝಲ್(18) ಎಂದು ತಿಳಿದುಬಂದಿದೆ.

ಈ ಇಬ್ಬರು ವಿದ್ಯಾರ್ಥಿಗಳು ಕ್ಲಾಸ್ ಮುಗಿಸಿ, ಉಡುಪಿ ನಗರದಲ್ಲಿರುವ ಸಿಟಿ ಸೆಂಟರ್ ಗೆ ಹೋಗಿದ್ದರು. ಅಲ್ಲಿ ಮೂರನೇ ಮಹಡಿಯಿಂದ ಕೆಳಗೆ ಬರುವಾಗ ಲಿಫ್ಟ್ ಕೆಟ್ಟು ಹೋಗಿದ್ದರಿಂದ ಆಟೋಮ್ಯಾಟಿಕ್ ಎಕ್ಸಲೆಟರ್ ಮೇಲೆ ನಡೆದುಕೊಂಡು ಕೆಳಗೆ ಬರುತ್ತಿದ್ದಾಗ ಸಿಟಿ ಸೆಂಟರ್ ನ ಇಬ್ಬರು ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ತಡೆದು ನಿಲ್ಲಿಸಿ ಎಕ್ಸಲೆಟರ್ ಮೇಲೆ ಏಕೆ ಬಂದಿದ್ದು ಅಂತ ತಗಾದೆ ತೆಗೆದು ವಿದ್ಯಾರ್ಥಿಗಳಿಗೆ ಮನಸೊಇಚ್ಛೆ ಹಲ್ಲೆ ಮಾಡಿದ್ದಾರೆ.

ಹಲ್ಲೆಯಿಂದ ನಿಹಾಲ್ ತುಟಿ ಒಡೆದು ರಕ್ತ ಗಾಯವಾಗಿದೆ.
ಪೈಝಲ್ ನ ಹೊಟ್ಟೆ, ಬೆನ್ನು ಭಾಗಕ್ಕೆ ಕೈಯಿಂದ ಗುದ್ದಿ ಹಲ್ಲೆ ಮಾಡಿರುತ್ತಾರೆ.
ತಕ್ಷಣ ಸ್ಥಳೀಯರು ವಿದ್ಯಾರ್ಥಿಗಳನ್ನು ಸಿಬ್ಬಂದಿಯ ಕೈಯಿಂದ ಪಾರು ಮಾಡಿ, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆಯೂ ಕೂಡ ಉಡುಪಿ ಸಿಟಿ ಸೆಂಟರ್ ಸಿಬ್ಬಂದಿಗಳು ಕ್ಷುಲ್ಲಕ ವಿಚಾರಕ್ಕೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಈ ಘಟನೆಯಿಂದ ಆಘಾತಕ್ಕೊಳಗಾದ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಕಾರ್ಯ ನಿಮಿತ್ತ ಸಿಟಿ ಸೆಂಟರ್ ಗೆ ಬರುವವರಿಗೆ ಈ ನಮೂನೆಯ ಕಹಿ ಅನುಭವ ಉಂಟಾಗುವುದನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ.