


ಡೈಲಿ ವಾರ್ತೆ: 19/ಮಾರ್ಚ್ /2025


ಪೊಲೀಸರಿಂದಲೇ ಹಿಟ್ ಆ್ಯಂಡ್ ರನ್: ಬೈಕ್ ಸವಾರ ಸಾವು, ಜೀಪ್ ಚಾಲಕ ಸಸ್ಪೆಂಡ್

ಚಿಕ್ಕಮಗಳೂರು: ಪೊಲೀಸ್ ಜೀಪ್ ಡಿಕ್ಕಿಯಿಂದ ದ್ವಿಚಕ್ರವಾಹನದ ಸವಾರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗಟಗೆರೆ ಪೊಲೀಸ್ ಠಾಣೆಯ ಜೀಪ್ ಚಾಲಕ ಶಿವಕುಮಾರ್ನ್ನು ಅಮಾನತು ಮಾಡಿ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಆಮ್ಟೆ ಆದೇಶ ಹೊರಡಿಸಿದ್ದಾರೆ.
ಸಿಂಗಟಗೆರೆ ಠಾಣೆಗೆ ಸೇರಿದ ಜೀಪ್ ಡಿಕ್ಕಿಯಿಂದ ಗಂಗಾಧರ್(49) ಎಂಬುವವರು ಸಾವನ್ನಪ್ಪಿದ್ದರು.
ಕಡೂರು ಪಟ್ಟಣದ ಮಚ್ಚೇರಿ ಗ್ರಾಮದ ಬಳಿ ಅಪಘಾತ ಸಂಭವಿಸಿತ್ತು. ಕಡೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಸದ್ಯ ಪೊಲೀಸರು ಚಾಲಕ ಶಿವಕುಮಾರ್ ಬಂಧಿಸಿ ಜೀಪ್ ವಶಕ್ಕೆ ಪಡೆದಿದ್ದಾರೆ. ಅಪಘಾತ ವೇಳೆ ಪೊಲೀಸ್ ಜೀಪ್ ನಿಲ್ಲಿಸದೇ ಶಿವಕುಮಾರ್ ಪರಾರಿಯಾಗಿದ್ದ. ಜೀಪ್ ಚಾಲಕನ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಘಟನೆ ವಿವರ:
ಕಡೂರು ಪಟ್ಟಣದ ಮಚ್ಚೇರಿ ಗ್ರಾಮದ ಬಳಿ ಚಾಲಕ ಅತೀ ವೇಗವಾಗಿ ಪೊಲೀಸ್ ಜೀಪುನ್ನು ಚಲಾಯಿಸಿಕೊಂಡು ಬಂದು ಬೈಕ್ಗೆ ಹಿಂಭಾಗದಿಂದ ಡಿಕ್ಕಿ ಹೊಡೆದಿರುತ್ತಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ ಜೀಪ್ ನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದ. ಆ ಮೂಲಕ ಪೊಲೀಸರಿಂದಲೇ ಹಿಟ್ ಆ್ಯಂಡ್ ರನ್ ಮಾಡಲಾಗಿದೆ.
ಘಟನೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ನೂರಾರು ಸ್ಥಳೀಯರು ಸೇರಿದ್ದರು. ಈ ವೇಳೆ ಮೃತ ದೇಹ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದರು.