ಡೈಲಿ ವಾರ್ತೆ: 26/MAY/2025

ಟ್ರಾಫಿಕ್ ಪೊಲೀಸರ ಎಡವಟ್ಟು: ಮೂರೂವರೆ ವರ್ಷದ ಮಗು ಬಲಿ!

ಮಂಡ್ಯ: ನಗರದಲ್ಲಿ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮೂರೂವರೆ ವರ್ಷದ ಮಗು ಬಲಿಯಾಗಿರುವಂತಹ ಘಟನೆ ಸ್ವರ್ಣಸಂದ್ರ ಬಳಿಯ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.

ಜಿಲ್ಲೆಯ ಮದ್ದೂರು ತಾಲೂಕಿನ ಗೊರವನಹಳ್ಳಿ ನಿವಾಸಿಗಳಾದ ಅಶೋಕ್, ವಾಣಿ ದಂಪತಿಯ ಪುತ್ರಿ ಹೃತೀಕ್ಷಾ ಸ್ಥಳದಲ್ಲೇ ಮೃತಪಟ್ಟ ಮಗು. ಮಂಡ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಘಟನೆ ವಿವರ:
ಮಗು ಹೃತೀಕ್ಷಾಗೆ ನಾಯಿ ಕಚ್ಚಿದ್ದರಿಂದ ತಂದೆ, ತಾಯಿ ಬೈಕ್​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಹೆಲ್ಮೆಟ್ ತಪಾಸಣೆಗಾಗಿ ಸ್ವರ್ಣಸಂದ್ರ ಬಳಿ ಸಂಚಾರಿ ಠಾಣೆ ಪೊಲೀಸರು ಬೈಕ್ ಅಡ್ಡಗಟ್ಟಿದ್ದಾರೆ. ಹೀಗಾಗಿ ಮಗು ಸೇರಿದಂತೆ ದಂಪತಿ ಆಯಾ ತಪ್ಪಿ ಬಿದಿದ್ದಾರೆ. ಈ ವೇಳೆ ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದೆ.

ಮಗುವನ್ನು ಮಡಿನಲ್ಲಿ ಇಟ್ಟುಕೊಂಡು ರಸ್ತೆಯಲ್ಲೇ ಪೋಷಕರು ಗೋಳಾಡಿದ್ದಾರೆ. ಘಟನೆ ಕಣ್ಣಾರೆ ಕಂಡು ಸಾರ್ವಜನಿಕರು ದಿಗ್ಭ್ರಮೆಗೊಂಡರೆ, ಮಂಡ್ಯ ಸಂಚಾರಿ ಪೊಲೀಸರಿಗೆ ಹೆತ್ತಕರುಳು ಹಿಡಿಶಾಪ ಹಾಕಿದೆ. ಸಂಚಾರಿ ಪೊಲೀಸರ ವಿರುದ್ಧ ಸ್ಥಳೀಯರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.