



ಡೈಲಿ ವಾರ್ತೆ: 26/MAY/2025


ಬಂಟ್ವಾಳ| ವರುಣಾರ್ಭಟಕ್ಕೆ ಹಲವೆಡೆ ಹಾನಿ, ಜನಜೀವನ ಅಸ್ತವ್ಯಸ್ತ

ಬಂಟ್ವಾಳ : ತಾಲೂಕಿನಾದ್ಯಂತ ಮಳೆ ಬಿರುಸು ಮುಂದುವರಿದಿದ್ದು, ಮಳೆ ಹಾನಿ ಪ್ರಕರಣಗಳೂ ಮುಂದುವರಿದಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ 16ನೇ ವಾರ್ಡಿನ ಬಿ ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಇಲ್ಲಿನ ನಿವಾಸಿ ನಾರಾಯಣ ಪೂಜಾರಿ ಅವರ ಮನೆ ಮೇಲೆ ಸುಮಾರು 200 ವರ್ಷಕ್ಕೂ ಹಳೆಯ ಆಲದ ಮರ ಬಿದ್ದು ಮನೆ ಮಂದಿ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಕೌನ್ಸಿಲರ್ ಮುಹಮ್ಮದ್ ನಂದರಬೆಟ್ಟು ಅವರು ಪರಿಶೀಲನೆ ನಡೆಸಿದ್ದು, ಅರಣ್ಯ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ ಮರ ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಒದಗಿಸಿಕೊಡುವಂತೆ ಸೂಚಿಸಿದ್ದಾರೆ.

ಬಿ.ಕಸಬಾ ಗ್ರಾಮದ ಮಂಡಾಡಿ ಎಂಬಲ್ಲಿ ಮಾಧವ ಎಂಬವರ ಮನೆ ಹಾಗೂ ಹಟ್ಟಿ ಮೇಲೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆದುಮೂಲೆಯಲ್ಲಿ ಭೂಕುಸಿತದ ದೂರಿನ ಬಗ್ಗೆ ಪರಿಶೀಲಿಸಿದ ಅಧಿಕಾರಿಗಳ ತಂಡ ಭೂಕುಸಿತದಿಂದ ಅಪಾಯ ಎದುರಿಸುವ ಮನೆ ಮಂದಿಗೆ ತಿಳುವಳಿಕೆ ಪತ್ರ ನೀಡಿದೆ. ಭೂಕುಸಿತವಾಗುತ್ತಿರುವ ಜಾಗದ ಮಾಲೀಕರಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮವಹಿಸಲು ತಿಳುವಳಿಕೆ ಪತ್ರ ನೀಡಿದೆ.


ಬಿ.ಕಸಬಾ ಗ್ರಾಮದ ಅರ್ಬಿಗುಡ್ಡೆ ಎಂಬಲ್ಲಿ ಗುಡ್ಡ ಜರಿದು ಸಲೀಮ್ ಎಂಬವರ ಮನೆಗೆ ಸಂಪರ್ಕಿಸುವ ಕಾಲು ದಾರಿ ಮುಚ್ಚಿದ್ದು, ಬಂಟ್ವಾಳ ಪುರಸಭೆಗೆ ಮಣ್ಣು ತೆರವು ಮಾಡಲು ತಹಶೀಲ್ದಾರ್ ಕೋರಿದ್ದಾರೆ. ತಾಲೂಕು ಲೋಕೋಪಯೋಗಿ ಇಲಾಖೆ ರಸ್ತೆಯಾದ ಕುದ್ದುಪದವು ತೋರಣಕಟ್ಟೆ ಅಜೆಕಳ ಸಾಜ ಬಿಳಿಯೂರುಕಟ್ಟೆ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಎಎಒ ಪೈಪ್ ಲೈನ್ ಕಾಮಗಾರಿಯಿಂದ ರಸ್ತೆ ಶೋಲ್ಡರ್ ಹಾಗೂ ಡ್ರೈನ್ ಹಾಳಾಗಿರುತ್ತದೆ, ರಸ್ತೆ ಅಂಚಿನಲ್ಲಿ ಕಂದಕ ನಿರ್ಮಿಸಿರುವುದರಿಂದ ರಸ್ತೆಯು ಕುಸಿಯುವ ಸಂಭವವಿದೆ. ಆರ್ ಡಿ ಡಬ್ಲ್ಯು ಎಸ್ ಇಲಾಖೆಯವರು ತುರ್ತು ಕ್ರಮವಹಿಸಿ ಸರಿಪಡಿಸಬೇಕಾಗಿದೆ ಎಂದು ತಹಶೀಲ್ದಾರರು ತಿಳಿಸಿದ್ದಾರೆ.

ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಬಳಿ ಅಪಾಯಕಾರಿಯಾಗಿ ಬಾಗಿದ್ದ ಮರವನ್ನು ತಹಶೀಲ್ದಾರ್ ನೇತೃತ್ವದಲ್ಲಿ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ. ಮೇರಮಜಲು ಗ್ರಾಮದ ಪಕ್ಕಲಪಾದೆ ಅಂಗನವಾಡಿಗೆ ತಾಗಿದ ಬರೆ ಕುಸಿದಿದ್ದು ಮುಂದಿನ ದಿನಗಳಲ್ಲಿ ಅಂಗನವಾಡಿ ಕಟ್ಟಡದ ತಳ ಕುಸಿಯುವ ಸಂಭವ ಇದೆ. ಪ್ರಸ್ತುತ ಅಂಗನವಾಡಿ ಕೇಂದ್ರಕ್ಕೆ ರಜೆ ಘೋಷಿಸಲಾಗಿದೆ. ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿ ಲೋರಟ್ಟೋಪದವು ಎಂಬಲ್ಲಿ ಎಂ.ಆರ್.ಪಿ.ಎಲ್ ಟ್ಯಾಂಕ್ ಸುತ್ತ ಮಣ್ಣು ಜರಿದು ಟ್ಯಾಂಕ್ ಅಪಾಯದ ಅಂಚಿನಲ್ಲಿದೆ ಹಾಗೂ ಇದರ ಹತ್ತಿರ ಮುತ್ತು ಕೋಂ ಗಿರಿಯಪ್ಪ ಅವರ ವಾಸದ ಮನೆ ಕೂಡ ಇರುತ್ತದೆ. ಈ ಬಗ್ಗೆ ಎಂ.ಆರ್ ಪಿ.ಎಲ್ ಸಂಸ್ಥೆಯವರಿಗೆ ಸ್ಥಳ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ತಹಶೀಲ್ದಾರರು ನಿರ್ದೇಶಿಸಿದ್ದಾರೆ.
ಅಮ್ಟಾಡಿ ಗ್ರಾಮದ ಲೊರೆಟ್ಟೊ ಎಂಬಲ್ಲಿನ ಪ್ರಾಕೃತಿಕ ವಿಕೋಪದ ಸ್ಥಳಗಳಿಗೆ ಭೇಟಿ ನೀಡಿರುವ ತಹಶೀಲ್ದಾರ್ ಅರ್ಚನಾ ಭಟ್ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ. ಅಮ್ಮುಂಜೆ ಗ್ರಾಮ ಪಂಚಾಯತು ವ್ಯಾಪ್ತಿಯ ಆಲಾಡಿ ಮತ್ತು ಬಾರಿಂಜೆ ಪ್ರದೇಶಗಳಲ್ಲಿ ಮಳೆ ನೀರು ತುಂಬಿ ಅಪಾಯದ ಸ್ಥಿತಿಯಿದ್ದು, ಇಲ್ಲಿಗೂ ಭೇಟಿ ನೀಡಿದ ತಹಶೀಲ್ದಾರರು ನೀರು ಸರಾಗವಾಗಿ ಹಾದು ಹೋಗಲು ವ್ಯವಸ್ಥೆ ಮಾಡಿದ್ದಾರೆ.
ಪಾಣೆಮಂಗಳೂರು ಗ್ರಾಮದ ಬೋಳಂಗಡಿ ನಿವಾಸಿ ಭಾಸ್ಕರ್ ಶೆಣೈ ಅವರ ಮನೆಗೆ ನೀರು ನುಗ್ಗಿದ್ದು ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿಗಳು ತೆರಳಿ ನೀರು ತೆರವುಗೊಳಿಸಿದ್ದಾರೆ.
ಬಂಟ್ವಾಳ ನೇತ್ರಾವತಿ ನದಿ ನೀರಿನ ಮಟ್ಟ ಸೋಮವಾರ ಸಂಜೆ ವೇಳೆಗೆ 4.3 ರಲ್ಲಿ ಹರಿಯುತ್ತಿದ್ದು, ನೀರಿನ ಮಟ್ಟ 7 ಮೀಟರಿಗೇರಿದರೆ ನದಿ ಪಾತ್ರದ ಮನೆಗಳಿಗೆ ನೆರೆ ನೀರು ನುಗುತ್ತದೆ. ತಾಲೂಕಿನಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಹಾನಿಗೀಡಾಗಿದ್ದು, ಮೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಾತ್ರಿ-ಹಗಲು ತುರ್ತು ಪರಿಹಾರ ಕಾರ್ಯದಲ್ಲಿ ತಲ್ಲೀಣರಾಗಿದ್ದಾರೆ. ವಿಟ್ಲ ಪರಿಸರದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಇಲ್ಲಿನ ಮೆಸ್ಕಾಂ ಸಿಬ್ಬಂದಿಗಳು ಕೂಡಾ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.