ಡೈಲಿ ವಾರ್ತೆ: 27/MAY/2025

ಹುಣಸೂರು: ಹುಲಿ ದಾಳಿಗೆ ನವವಿವಾಹಿತ ಕುರಿಗಾಹಿ ಸಾವು

ಹುಣಸೂರು: ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ 5ನೇ ಬ್ಲಾಕ್ ನಿವಾಸಿ ಹರೀಶ್ (29) ಕುರಿ ಮೇಯಿಸುತ್ತಿದ್ದಾಗ ಸೋಮವಾರ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಮೂರು ತಿಂಗಳ ಹಿಂದಷ್ಟೆ ಅವರ ಮದುವೆಯಾಗಿತ್ತು.

ಘಟನೆ ವಿವರ:
ಹರೀಶ್ ತಂದೆಯೊಂದಿಗೆ ಬೆಳಗ್ಗೆ ಜಮೀನು ಬಳಿಯ ಅರಣ್ಯ ಪ್ರದೇಶದಲ್ಲಿ ಮೇಕೆ ಮೇಯಿಸಲು ತೆರಳಿದ್ದಾನೆ. ತಂದೆ ಕೃಷ್ಣ ಅರಣ್ಯದ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮೇಕೆ ಮೇಯಿಸುತ್ತಿದ್ದ ಹರೀಶ್ ಮೇಲೆ ಒಮ್ಮೆಲೆ ಹುಲಿ ದಾಳಿ ನಡೆಸಿದೆ. ಹರೀಶ್ ಕಿರುಚಿದಾಗ ತಂದೆ ಕೃಷ್ಣ ಧಾವಿಸಿ ಬಂದು ಹುಲಿಯ ಬೆದರಿಸಿ ಓಡಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದ ಹರೀಶ್ ಸಾಕಷ್ಟು ರಕ್ತ ಸ್ರಾವದಿಂದ ಅಸ್ವಸ್ಥಗೊಂಡಿದ್ದ ಆತನ ಹುಣಸೂರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದರು.

ಆಸ್ಪತ್ರೆಗೆ ನಾಗರಹೊಳೆ ಉದ್ಯಾನದ ಮುಖ್ಯಸ್ಥೆ ಪಿ.ಎ.ಸೀಮಾ, ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಮಹಮ್ಮದ್ ಪೈಜಲ್, ಆರ್.ಎಫ್.ಒ ನಂದಕುಮಾರ್‌, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಂಗಾಧರ್, ವ್ಯವಸ್ಥಾಪಕಿ ಪುಷ್ಪಾ, ಆಶ್ರಮ ಶಾಲಾ ಮುಖ್ಯ ಶಿಕ್ಷಕ ಲಕ್ಷ್ಮಣ್ ಭೇಟಿ ನೀಡಿ, ಕುಟುಂಬದವರ ಸಂತೈಸಿದರು.

20 ಲಕ್ಷ ರೂ. ಪರಿಹಾರ ಘೋಷಣೆ, ಹುಲಿ ಸೆರೆಗಾಗಿ ಕೂಂಬಿಂಗ್ ಶುರು:
ಹುಲಿ ದಾಳಿಗೆ ಒಳಗಾಗಿ ಮೃತಪಟ್ಟ ನವವಿವಾಹಿತ ಹರೀಶ್‌ ಕುಟುಂಬಕ್ಕೆ ಟೈಗರ್ ಫೌಂಡೇಶನ್ ವತಿಯಿಂದ ತಕ್ಷಣಕ್ಕೆ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಲಾಗುವುದು. ಬಳಿಕ 15 ಲಕ್ಷ ರೂ. ಚೆಕ್ ನೀಡಲಾಗುವುದು. ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ನಡೆಸಲು ಆದೇಶಿಸಲಾಗಿದೆ ಡಿಸಿಎಫ್ ಸೀಮಾ ತಿಳಿಸಿದ್ದಾರೆ.