



ಡೈಲಿ ವಾರ್ತೆ: 28/MAY/2025


ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಹಾಲಾಡಿ ಶಾಖೆಯ ಹವಾನಿಯಂತ್ರಿತ ನವೀಕೃತ ಕಟ್ಟಡ ‘ರೈತಮಿತ್ರ’ ಲೋಕಾರ್ಪಣೆ

ಕುಂದಾಪುರ: ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಹಾಲಾಡಿ ಶಾಖೆಯ ಹವಾನಿಯಂತ್ರಿತ ನವೀಕೃತ ಕಟ್ಟಡ ‘ರೈತಮಿತ್ರ’ ಮೇ. 28 ರಂದು ಬುಧವಾರ ಲೋಕಾರ್ಪಣೆಗೊಂಡಿತು.


ಇದರ ಉದ್ಘಾಟನೆಯನ್ನು ಕರ್ನಾಟಕ ವಿಧಾನಪರಿಷತ್ ಮಾಜಿ ಸಭಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಅವರು ಮಾತನಾಡಿ ವ್ಯವಸಾಯಗಾರರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘಗಳು ಪರಿಣಾಮಕಾರಿಯಾದ ಕಾರ್ಯನಿರ್ವಹಿಸುತ್ತಿವೆ. ಸರಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ, ಪಡಿತರ ವಿತರಣೆಯಂತಹ ಕಾರ್ಯವನ್ನು ಯಶಸ್ವಿಯಾಗಿ ಅವಿಭಜಿತ ದಕ ಜಿಲ್ಲೆಯಲ್ಲಿ ಕೃಷಿಪತ್ತಿನ ಸಂಘಗಳು ನಿರ್ವಹಿಸುತ್ತಿವೆ. ಕೃಷಿಕರ ಪರವಾಗಿ ಕೆಲಸ ಮಾಡಲು, ಸೇವೆ ನೀಡಲು ಕೃಷಿಪತ್ತಿನ ಸಹಕಾರ ಸಂಘಗಳಿಗೆ ವಿಫುಲ ಅವಕಾಶಗಳಿದ್ದು ಅವಕಾಶಗಳನ್ನು ಬಳಸಿಕೊಂಡರೆ ಸಂಘವು ಬಲವರ್ಧನೆಯಾಗುತ್ತದೆ. ಅಲ್ಲದೆ ರೈತರಿಗೂ ಅನುಕೂಲವಾಗುತ್ತದೆ ಎಂದರು. ಪ್ರಸ್ತುತ ತೆಂಗಿನ ಕಾಯಿ ಧಾರಣೆ ಅಸ್ಥಿರವಾಗಿದೆ. ಮಾರುಕಟ್ಟೆಯಲ್ಲಿ ತೆಂಗಿನೆಣ್ಣೆಗೆ ಸ್ಥಿರ ಧಾರಣೆ ಇದೆ. ಆದರೆ ಶೇ 99ರಷ್ಟು ಕಲಬೆರಕೆ ತೆಂಗಿನ ಎಣ್ಣೆಯನ್ನೇ ಬಳಸುತ್ತೇವೆ. ಬಹುತೇಕ ಎಣ್ಣೆ ಗಿರಣಿಗಳು ಪಾರದರ್ಶಕವಾಗಿಲ್ಲ. ಹಾಗಾಗಿ ಶುದ್ಧತೆಂಗಿನ ಎಣ್ಣೆ ತಯಾರಿಸುವ ಘಟಕಗಳನ್ನು ನಿರ್ಮಿಸಿ ಸೇವೆ ನೀಡಲು ವ್ಯವಸಾಯ ಸೇವಾ ಸಹಕಾರಿ ಸಂಘಗಳಿಗೆ ಅವಕಾಶವಿದೆ. ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದವರು ಜಯರಾಮ ಶೆಟ್ಟಿಯವರ ನೇತೃತ್ವದಲ್ಲಿ ಈ ಯೋಜನೆಗೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಎಸ್.ಜಯರಾಮ ಶೆಟ್ಟಿ ಮಾತನಾಡಿ 1976 ಬಲಿಷ್ಟವಾಗಿದ್ದ ಬೆಳ್ಳೆ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಆಲ್ಬಾಡಿ ಮತ್ತು ಹಾಲಾಡಿ ವ್ಯವಸಾಯ ಸೇವಾ ಸಹಕಾರಿ ಸಂಘಗಳು ವಿಲೀನವಾದವು. ಈ ಒಟ್ಟುಗೂಡುವಿಕೆಯಿಂದ ಬಹಳಷ್ಟು ಪ್ರಯೋಜನವಾಯಿತು. ಹಾಲಾಡಿ ಶಾಖೆ ಇವತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಾಲ ಮರುಪಾವತಿ, ಠೇವಣಿ, ಸದಸ್ಯತ್ವ ಎಲ್ಲ ವಿಚಾರಗಳಲ್ಲೂ ಗುರುತಿಸಿಕೊಂಡಿದೆ. ಗ್ರಾಹಕರ ವಿಶ್ವಾಸದ ಕಾರಣ ಇವತ್ತು ಇಲ್ಲಿ ಸುಸಜ್ಜಿತವಾದ ಹವಾನಿಯಂತ್ರಿತ ಕಟ್ಟಡ ಆರಂಭವಾಗಲು ಕಾರಣವಾಯಿತು ಎಂದರು.
ಗ್ರಾಹಕರಿಗೆ ಲಾಕರ್ ಕೀ ಹಸ್ತಾಂತರ ಮಾಡಿ ಮಾತನಾಡಿದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರು, ಸಹಕಾರಿ ಕ್ಷೇತ್ರಕ್ಕೆ ಶತಮಾನದ ಇತಿಹಾಸವಿದೆ. ಕೃಷಿಪತ್ತಿನ ಸಹಕಾರ ಸಂಘಗಳು ಇವತ್ತು ರೈತರಿಗೆ ಪ್ರಾಮಾಣಿಕ ಸೇವೆ ನೀಡುತ್ತಾ, ಪ್ರಗತಿಯ ಪಥದಲ್ಲಿ ಮುನ್ನೆಡೆಯುತ್ತಿವೆ. ರೈತರಿಗೆ ಯಂತ್ರೋಪಕರಣಗಳು, ಔಷಧ, ಶಿಕ್ಷಣಕ್ಕೆ ನೆರವು, ಸಾಮಾಜಿಕ ಉದ್ದೇಶಗಳಿಗೆ ಉತ್ತೇಜನ ನೀಡುವಲ್ಲಿ ಸಹಕಾರ ಕ್ಷೇತ್ರ ತೊಡಗಿಸಿಕೊಂಡಿದೆ. ಗಳಿಸಿದ ಲಾಭದಲ್ಲಿ ಸದಸ್ಯರಿಗೆ, ಸಮಾಜಕ್ಕೆ ನೀಡುವುದು ಕೂಡಾ ಮುಖ್ಯ. ಇವತ್ತು ಹಾಲಾಡಿಯಲ್ಲಿ ಅಂದು ಮಹಾಬಲ ಶೆಟ್ಟಿಯವರು ಸಹಕಾರದ ಉದ್ದೇಶಕ್ಕೆ ನಿವೇಶನ ಕಾದಿರಿಸಿದ್ದನ್ನು ಇಂದೂ ಜನ ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಮ್.ಮಹೇಶ ಹೆಗ್ಡೆ ಹೊಸ ನವೋದಯ ಸ್ವ-ಸಹಾಯ ಸಂಘಗಳನ್ನು ಉದ್ಘಾಟಿಸಿದರು.
ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಕನ್ಯ, ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಚೋರಾಡಿ ಶುಭ ಹಾರೈಸಿದರು.
ಸಂಘದ ಉಪಾಧ್ಯಕ್ಷ ಹರೀಶ ಕಿಣಿ ಬಿ., ನಿರ್ದೇಶಕರಾದ ಎಚ್.ಕೆ. ಸೀತಾರಾಮ ಶೆಟ್ಟಿ, ಎಂ. ಚಂದ್ರಶೇಖರ್ ಶೆಟ್ಟಿ, ದಯಾನಂದ ಪೂಜಾರಿ, ಇಚ್ಚಿತಾರ್ಥ ಶೆಟ್ಟಿ, ಉದಯ್ ಶೆಟ್ಟಿ, ಕೃಷ್ಣ ನಾಯ್ಕ್, ಸವಿತಾ ಪಿ. ಶೆಟ್ಟಿ, ಸುಜಾತಾ ಪೂಜಾರಿ, ಶಿವರಾಮ, ಪ್ರದೀಪ್, ವಲಯ ಮೇಲ್ವಿಚಾರಕ ಚಂದ್ರಶೇಖರ್ ಶೆಟ್ಟಿ, ಶಾಖಾವ್ಯವಸ್ಥಾಪಕ ಚಂದ್ರಶೇಖರ್ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ಇಬ್ಬರು ಹಿರಿಯ ಸದಸ್ಯರಾದ ಸಯ್ಯದ್ ಸಾಹೇಬ್, ಸುಬ್ರಾಯ ಅವರನ್ನು ಗೌರವಿಸಲಾಯಿತು. ನೂತನ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಬಾಲಚಂದ್ರ ಶೆಟ್ಟಿ ಹಾಲಾಡಿ, ಕಟ್ಟಡದ ಒಳವಿನ್ಯಾಸ ನಿರ್ವಹಿಸಿದ ಸತೀಶ್ ನಾಯಕ್ ಮಂಗಳೂರು ಅವರನ್ನು ಸನ್ಮಾನಿಸಲಾಯಿತು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಕೀರ್ತಿಕುಮಾರ್ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಸುಬ್ರಮಣ್ಯ ಪಡುಕೋಣೆ ನಿರೂಪಿಸಿದರು. ಡಾ. ಗಣೇಶ್ ಗಂಗೊಳ್ಳಿ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.