



ಡೈಲಿ ವಾರ್ತೆ: 01/JUNE/2025


ಪೊಲೀಸ್ ಇಲಾಖೆ ವಾಹನ ತಪಾಸಣೆಗೆ ಹೊಸ ನಿಯಮ ಜಾರಿ: ಕದ್ದು ಮುಚ್ಚಿ ಗಾಡಿ ಹಿಡಿಯದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ರಿಂದ ಹೊಸ ಆದೇಶ, ವಾಹನ ಸವಾರರ ಬೈಕ್ ಕೀ ಕಿತ್ತುಕೊಳ್ಳುವಂತಿಲ್ಲ!

ಬೆಂಗಳೂರು: ಮಂಡ್ಯ ಪೊಲೀಸರ ಅಮಾನವೀಯ ವರ್ತನೆಯಿಂದ ಮೂರು ವರ್ಷದ ಮಗು ಸಾವಿನ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆಯು ವಾಹನ ತಪಾಸಣೆ ಮಾಡುವಾಗ ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಹೊಸ ಆದೇಶ ಹೊರಡಿಸಿದ್ದಾರೆ.
ಹೊಸ ಆದೇಶದಲ್ಲೇನಿದೆ?
- ಸಕಾರಣವಿಲ್ಲದೆ ವಾಹನಗಳನ್ನ ತಡೆದು ತಪಾಸಣೆಗೆ ಒಳಪಡಿಸಬಾರದು
- ಕಣ್ಣಿಗೆ ಕಾಣುವ (visible Violation) ಕಂಡುಬಂದಲ್ಲಿ ಮಾತ್ರವೇ ವಾಹನಗಳನ್ನ ನಿಲ್ಲಿಸಬೇಕು
- ಹೆದ್ದಾರಿಯಲ್ಲಿ ಜಿಗ್ ಜ್ಯಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯಬಾರದು
- ರಸ್ತೆಯಲ್ಲಿ ದಿಢೀರನೆ ಅಡ್ಡ ಬಂದು ವಾಹನಗಳನ್ನ ನಿಲ್ಲಿಸುವಂತೆ ಹೇಳಬಾರದು
- ದ್ವಿಚಕ್ರವಾಹನದ ಹಿಂಬದಿ ಸವಾರನನ್ನ ಹಿಡಿದು ಎಳೆಯುವಂತಿಲ್ಲ
- ವಾಹನಗಳ ಕೀ ಕಸಿಯುವುದನ್ನು ಮಾಡಬಾರದು
- ವೇಗವಾಗಿ ಬರುವ ವಾಹನಗಳ ಬೆನ್ನಟ್ಟದೆ ನೊಂದಣಿ ಸಂಖ್ಯೆ ಗುರುತು ಮಾಡಿ ಕಂಟ್ರೋಲ್ ರೂಂ ಗೆ ಮಾಹಿತಿ ನೀಡುವುದು
- ವಾಹನಗಳ ತಪಾಸಣೆ ವೇಳೆ ಪೊಲೀಸ್ರು ರಿಫ್ಲೆಕ್ಟೀವ್ ಜಾಕೆಟ್ ಧರಿಸಿರಬೇಕು
- ಸಂಜೆ ಸಮಯದಲ್ಲಿ ಕಡ್ಡಾಯವಾಗಿ ಎಲ್ ಇ ಡಿ ಬಟನ್ ಬಳಸಬೇಕು
- ವಾಹನಗಳ ತಪಾಸಣೆ ವೇಳೆ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮೆರಾ ಧರಿಸಿರಬೇಕು
- ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಇತರೆ ರಸ್ತೆಗಳಲ್ಲಿ ಅತೀ ವೇಗವಾಗಿ ಚಲಿಸುವ ವಾಹನಗಳನ್ನ ತಡೆಯಬಾರದು
- ತಪಾಸಣೆಯ ಸ್ಥಳದ 100 ರಿಂದ 150 ಮೀಟರ್ ಮೊದಲೇ ರಿಫ್ಲೆಕಟ್ಈವ್ ರಬ್ಬರ್ ಕೋನ್ಗಳ ಬಳಸಿ ಸುರಕ್ಷತಾ ಸಲಕರಣೆಗಳನ್ನು ಅಳವಡಿಸಿಕೊಳ್ಳಬೇಕು.
ಮೇ 26 ರಂದು ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಯಡವಟ್ಟಿನಿಂದ ಮೂರುವರೆ ವರ್ಷದ ಮಗು ಸಾವನ್ನಪ್ಪಿತ್ತು. ಮದ್ದೂರು ತಾಲೂಕಿನ ಗೊರವನಹಳ್ಳಿಯ ವಾಣಿ-ಅಶೋಕ್ ದಂಪತಿಯ ಪುತ್ರಿ ಹೃತೀಕ್ಷಾ ಮೃತಪಟ್ಟ ಬಾಲಕಿ. ನಾಯಿ ಕಚ್ಚಿದ್ದರಿಂದ ಆಸ್ಪತ್ರೆಗೆ ದಂಪತಿ ಕರೆದುಕೊಂಡು ಬರುತ್ತಿದ್ದರು. ಈ ವೇಳೆ, ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪೊಲೀಸರು ಹೆಲ್ಮೆಟ್ ತಪಾಸಣೆಗೆ ಬೈಕ್ ಅಡ್ಡಗಟ್ಟಿದ್ದರು. ಈ ವೇಳೆ ಬೈಕ್ ಆಯಾ ತಪ್ಪಿ ಬಿದ್ದು, ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದು, ಸಾವನ್ನಪ್ಪಿತ್ತು. ಈ ಘಟನೆ ಬೆನ್ನಲ್ಲೇ ಟ್ರಾಫಿಕ್ ಪೊಲೀಸರ ಯಡವಟ್ಟಿನ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಪೊಲೀಸ್ ಇಲಾಖೆ ವಾಹನ ತಪಾಸಣೆಗೆ ಹೊಸ ನಿಯಮ ಜಾರಿ ಮಾಡಿದೆ.