ಡೈಲಿ ವಾರ್ತೆ: 14/JUNE/2025

ಕೋಟ ಪೊಲೀಸ್ ಠಾಣೆಗೆ ಕರ್ನಾಟಕ ಗೃಹ ಸಚಿವ ಡಾ ಪರಮೇಶ್ವರ್ ಭೇಟಿ

ಕೋಟ| ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದ ಗೃಹ ಸಚಿವ ಡಾ. ಪರಮೇಶ್ವರ್ ಶನಿವಾರ ಬೆಳಿಗ್ಗೆ ಕೋಟ ಪೊಲೀಸ್ ಠಾಣೆಗೆ ಭೇಟಿ ನೀಡಿದರು.

ಠಾಣೆಗೆ ಬಂದು ದೂರು ನೀಡಿದವರ ಕೆಲವರ ಯೋಗ ಕ್ಷೇಮ ವಿಚಾರಿಸಿ, ಠಾಣೆಯ ಕುರಿತು ಅಭಿಪ್ರಾಯ ಪಡೆದುಕೊಂಡು, ಕೆಲವು ಸಲಹೆ, ಸೂಚನೆ ನೀಡಿದರು.

ಅಪಘಾತ, ಕ್ರೂರ ಪ್ರಕರಣಗಳು, ಅಧಿಕೃತ ರಕ್ಷಣಾ ಆಯುಧಗಳ ಪರವಾನಿಗೆ, ಹೊಂದಿರುವವರ ಕುರಿತು ಮಾಹಿತಿ ಪಡೆದರು.

ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಸಿವಿಲ್ ವ್ಯಾಜ್ಯಗಳ ಕುರಿತು ಠಾಣಾ ಉಪನಿರೀಕ್ಷಕ ರಾಘವೇಂದ್ರ ಸಿ. ಗಮನ ಸೆಳೆದರು. ಅಪಘಾತವನ್ನು ಘೋರ ಪಾತಕ ಕೃತ್ಯಗಳಲ್ಲಿ ಪರಿಗಣಿಸುತ್ತೀರಾ ಎಂದು ಕೇಳಿದ ಪ್ರಶ್ನೆ ಗೆ, ಉಡುಪಿ ಜಿಲ್ಲಾ ಎಸ್ ಪಿ ಹರಿರಾಂ ಶಂಕರ್ ಉತ್ತರ ನೀಡಿ, ಘೋರ, ಭೀಕರ, ಬೇಕಾಬಿಟ್ಟಿ ಚಾಲನೆಯಿಂದ ಆದ ಜೀವ ಹಾನಿ ಪ್ರಕರಣಗಳು ಅಂತಹ ದಾರುಣ ಪ್ರಕರಣಗಳಲ್ಲಿ ಬರುತ್ತವೆ ಎಂದರು.

ಸಾಮಾಜಿಕ ಕಾರ್ಯಕರ್ತ ಡಾ. ಎಮ್ ವಿ ಹೊಳ್ಳ ಸಚಿವರಿಗೆ, ಪೋಲೀಸ್ ವಾಹನ ಕೊರತೆ ಕುರಿತು ಗಮನ ಸೆಳೆದರು.
ಹೆಚ್ಚು ತ್ತಿರುವ ಸಿವಿಲ್ ವ್ಯಾಜ್ಯಗಳು, ಪಿಡಿಓ ನಿರ್ಲಕ್ಷ ದಿಂದ ಆಗುತ್ತಿದ್ದು, ಸಮಯಕ್ಕೆ ಸರಿಯಾದ ಸ್ಪಂದನ ಇದ್ದಲ್ಲಿ ಪ್ರಕರಣ ಠಾಣೆ ಮೆಟ್ಟಿಲು ಹತ್ತುವುದಿಲ್ಲ ಎಂದರು.

ಹೆದ್ದಾರಿ ಬ್ಯಾರಿಕೇಡ್ ಆವಾಂತರ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ ಸುಗಮ ಸಂಚಾರ ವ್ಯವಸ್ಥೆ ಗೆ ಅನುವು ಮಾಡಿಕೊಡುವಂತೆ ಮನವಿ ಮಾಡಲಾಯಿತು.


ಎಲ್ಲಾ ಜಾತಿ, ಸಮುದಾಯದ ಸಣ್ಣ, ದೊಡ್ಡ ಪ್ರಾರ್ಥನಾ ಮಂದಿರ ಗಳಿಗೆ ರಾತ್ರಿ ಬೆಳಕಿನ ಸೌಲಭ್ಯ ಹಾಗೂ ಸಿಸಿಟಿವಿ ಅಳವಡಿಸುವಂತೆಯೂ, ಅದರ ಮಾಹಿತಿ ಪ್ರತಿದಿನ ಠಾಣಾ ವ್ಯಾಪ್ತಿಯಲ್ಲಿ ಬರುವಂತೆಯೂ ಸಲಹೆ ನೀಡಲಾಯಿತು.
ದಲಿತ ಕುಂದುಕೊರತೆ ಸಭೆಗಳನ್ನು ಪ್ರತಿತಿಂಗಳು ನಡೆಸುತ್ತಿದ್ದೇವೆ ಎಂದು ಠಾಣಾ ಉಪನಿರೀಕ್ಷಕ ರಾಘವೇಂದ್ರ ಸಿ. ಸಚಿವರ ಪ್ರಶ್ನೆಗೆ ಉತ್ತರ ನೀಡಿದರು.
ಪೋಲೀಪರ ವಸತಿ ಕುರಿತು ಸಚಿವರು ಮಾಹಿತಿ ಪಡೆದುಕೊಂಡರು.

ಪೊಲೀಸ್ ಕಾನ್ಸ್ಟೇಬಲ್ ಆಸಕ್ತ ಅಭ್ಯರ್ಥಿಗಳ ವಯೋಮಿತಿ 33 ವರ್ಷಕ್ಕೆ ಏರಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಅನ್ಯ ರಾಜ್ಯಗಳಲ್ಲಿನ ವಿವರ ಪಡೆದು ಮುಂದೆ ಈ ಬಗ್ಗೆ ಕ್ರಮ ಕೈ ಗೊಳ್ಳಲಾಗುವುದು ಎಂದು ಹೇಳಿದರು.ಅಲ್ಲದೇ ಎರಡು, ಮೂರು ತಿಂಗಳಿಂದ ಕೋಟ ಠಾಣೆಗೆ ವಾಹನ ಇಲ್ಲದೆ ಇರುವುದು, ಟೋಲ್ ಸಮಸ್ಯೆ, ಸಮುದ್ರ ಕಿನಾರೆಯಲ್ಲಿನ ಬಂದೋ ಬಸ್ತ್, SCST ಸಮಸ್ಯೆ ನಿರ್ಮೂಲನೆ, ಕಂದಾಯ ಇಲಾಖೆಯ ವ್ಯಾಜ್ಯಗಳು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ಕೊರತೆ ಬಗ್ಗೆ ಕೇಳಿದ ಪ್ರೆಶ್ನೆಗೆ ಆದಷ್ಟು ಬೇಗ ನೇಮಕಾತಿ ಪಕ್ರಿಯೆ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಪೋಲೀಸ್ ಅಧಿಕಾರಿಗಳಾದ ಐಜಿ ಅಮಿತ್ ಸಿಂಗ್, ಎಸ್ಪಿ ಹರಿರಾಂ ಶಂಕರ್, ಎಎಸ್ಪಿ ಪರಮೇಶ್ವರ್, ಉಡುಪಿ ಡಿವೈಎಸ್ಪಿ ಡಿ ಟಿ ಪ್ರಭು, ಕುಂದಾಪುರ ಡಿವೈಎಸ್ಪಿ ಎಚ್ ಡಿ ಕುಲಕರ್ಣಿ, ಬ್ರಹ್ಮಾವರ ಇನ್ಸ್ಪೆಕ್ಟರ್ ಗೋಪಿಕೃಷ್ಣ, ಕೋಟ ಉಪನಿರೀಕ್ಷಕ ರಾಘವೇಂದ್ರ ಸಿ. ಕೋಟ ಎಸ್ಐ ಸುಧಾ ಪ್ರಭು ಮತ್ತು ಸಿಬ್ಬಂದಿಗಳು ಹಾಗೂ ಕಾಂಗ್ರೆಸ್ ಜಿಲ್ಲಾ ಮಾಜಿ ಅಧ್ಯಕ್ಷ ಅಬ್ದುಲ್ ಗಫೂರ್, ಮುನಿಯಾಲು ಉದಯ ಕುಮಾರ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಗೋಪಾಲ ಪೂಜಾರಿ, ರಾಜು ಪೂಜಾರಿ, ಹಾಗೂ ಸ್ಥಳೀಯರು, ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.