ಡೈಲಿ ವಾರ್ತೆ: 25/JUNE/2025

ವಯನಾಡಿನಲ್ಲಿ ಭಾರೀ ಮಳೆ: ಭೂಕುಸಿತದ ಆತಂಕ, 12 ಜಿಲ್ಲೆಗಳಿಗೆ ಅಲರ್ಟ್

ತಿರುವನಂತಪುರಂ: ಕೇರಳದಲ್ಲಿ ಮುಂಗಾರು ಅಬ್ಬರ ಜೋರಾಗಿದ್ದು, ರಾಜ್ಯದ 12 ಜಿಲ್ಲೆಗಳಿಗೆ ಭಾರೀ ಮಳೆ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದ ವಯನಾಡು, ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ ಜಿಲ್ಲೆಗಳಿಗೆ ಬುಧವಾರ ಆರೆಂಜ್ ಅಲರ್ಟ್ ಹಾಗೂ ಪತ್ತನಂತಿಟ್ಟ, ಆಲೆಪ್ಪಿ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್, ಕಣ್ಣೂರು, ಕಾಸರಗೋಡು ಜಿಲ್ಲೆಗಳಿಗೆ ಗುರುವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕಳೆದ ವರ್ಷ ಸುರಿದ ಭಾರೀ ಮಳೆಗೆ ವಯನಾಡು ಅಕ್ಷರಶಃ ಬೆಚ್ಚಿ ಬಿದ್ದು, ಸುಮಾರು 250ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಇದೀಗ ಮಂಗಳವಾರ ಸಂಜೆಯಿಂದ ಮತ್ತೆ ಮಳೆ ಆರ್ಭಟ ಜೋರಾಗಿದೆ. ದುರಂತದಲ್ಲಿ ಕೊಚ್ಚಿ ಹೋಗಿದ್ದ ಚೂರಲ್ಮಲ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಸದ್ಯ ಕಾಡಿನೊಳಗೆ ಭೂಕುಸಿತ ಆಗಿದೆಯಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ.

ಸದ್ಯ ಭಾರೀ ಮಳೆಯಿಂದಾಗಿ ಕಳೆದ ವರ್ಷದಲ್ಲಿ ಸಂಭವಿಸಿದ್ದ ದುರಂತದ ಅವಶೇಷಗಳು ತೇಲಿಕೊಂಡು ಬರುತ್ತಿವೆ. ಇನ್ನೂ ವೆಲ್ಲರಿಮಲದ ಪುನ್ನಪುಳ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಲರ್ಟ್ ಘೋಷಿಸಿದೆ.