



ಡೈಲಿ ವಾರ್ತೆ: 27/JUNE/2025


ಜಗನ್ನಾಥ ರಥಯಾತ್ರೆ ವೇಳೆ ಅಡ್ಡಾದಿಡ್ಡಿ ಓಡಿದ ಆನೆ: ಹಲವರಿಗೆ ಗಾಯ!

ಅಹ್ಮದಾಬಾದ್: ಅಹಮದಾಬಾದ್ನಲ್ಲಿ ನಡೆದ 148ನೇ ಜಗನ್ನಾಥ ರಥಯಾತ್ರೆ ಮೆರವಣಿಗೆ ವೇಳೆ ಆನೆಯೊಂದು ಅಡ್ಡಾದಿಡ್ಡಿ ಓಡಿದ್ದು, ಈ ವೇಳೆ ಹಲವರು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ರಥಯಾತ್ರೆಯಲ್ಲಿ ಎರಡರಿಂದ ಮೂರು ಆನೆಗಳು ಭಾಗಿಯಾಗಿದ್ದವು. ಖಾಡಿಯಾ ಪ್ರದೇಶದಲ್ಲಿ ಆನೆ ನಿಯಂತ್ರಣ ಕಳೆದುಕೊಂಡು ಭಯಭೀತವಾಗಿ ಅಡ್ಡಾದಿಟ್ಟಿ ಓಡಿದೆ. ಈ ವೇಳೆ ಮಾವುತರೂ ಕೂಡ ಆನೆ ಹಿಂದೆ ಓಡಿದ್ದು, ಆನೆಯನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾರೆ. ಆದರೆ, ನಿಯಂತ್ರಣಕ್ಕೆ ಸಿಕ್ಕಿಲ್ಲ. ಬಳಿಕ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪ್ರದೇಶವನ್ನು ತೆರವುಗೊಳಿಸಿದ್ದಾರೆ. ಹೀಗಾಗಿ. ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಬಳಿಕ ಅರಣ್ಯ ಇಲಾಖೆಯ ಸಹಾಯದಿಂದ ಆನೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಆನೆಯ ಓಡಾಟದಿಂದ ಉಂಟಾದ ಕಾಲ್ತುಳಿತದಲ್ಲಿ ಸಿಲುಕಿಕೊಳ್ಳದೆ ಕೆಲವರು ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದಾರೆ.
ಅಹಮದಾಬಾದ್ ನಗರದ ಪ್ರಸಿದ್ಧ ರಥೋತ್ಸವದಲ್ಲಿ, ಆನೆಗಳು ಯಾವಾಗಲೂ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತವೆ. ಈ ಬಾರಿ ರಥೋತ್ಸವಕ್ಕಾಗಿ ಒಟ್ಟು 16 ಆನೆಗಳು ಆಗಮಿಸಿದ್ದವು. ಅದರಲ್ಲಿ ಒಂದು ಗಂಡು ಆನೆ ಮಾನಸಿಕ ಅಸಮತೋಲನದಿಂದಾಗಿ ಇದ್ದಕ್ಕಿದ್ದಂತೆ ಓಡಲು ಪ್ರಾರಂಭಿಸಿದೆ. ಇದು ಸುತ್ತಮುತ್ತಲಿನ ಜನಸಮೂಹದಲ್ಲಿ ಭಯಭೀತತೆಯನ್ನು ಉಂಟುಮಾಡಿದೆ. ಸದ್ಯ ಭಯಭೀತಗೊಂಡಿದ್ದ ಆನೆ ಅರಣ್ಯ ಇಲಾಖೆ ಮತ್ತು ವೈದ್ಯರ ಮೇಲ್ವಿಚಾರಣೆಯಲ್ಲಿದೆ ಎಂದು ತಿಳಿದುಬಂದಿದೆ.