ಡೈಲಿ ವಾರ್ತೆ: 28/JUNE/2025

ಬೆಂಗಳೂರು| ಬೀದಿನಾಯಿಗಳಿಗೆ ವಿಷಪ್ರಾಶನ: ಒದ್ದಾಡುತ್ತ ಪ್ರಾಣಬಿಟ್ಟ 5 ಶ್ವಾನಗಳು

ಬೆಂಗಳೂರು: ಚಾಮರಾಜನಗರದ ಹನೂರು ತಾಲೂಕಿನ ಮೀಣ್ಯಂ ಸಮೀಪದ ಅರಣ್ಯದಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಮರಿಗಳಿಗೆ ವಿಷಪ್ರಾಶನ ಮಾಡಿ ಕೊಂದ ಆರೋಪ ಬೆನ್ನಲೇ ನಗರದಲ್ಲಿಯೂ ಐದು ಬೀದಿನಾಯಿಗಳು ವಿಷಸೇವನೆಗೆ ಒಳಗಾಗಿ ಮೃತಪಟ್ಟಿವೆ.

ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭಟ್ಟರಹಳ್ಳಿಯಲ್ಲಿ ಐದು ಶ್ವಾನಗಳು ರಕ್ತವಾಂತಿ ಮಾಡಿಕೊಂಡು ನರಳಿ ಸಾವನ್ನಪ್ಪಿವೆ. ನಾಯಿ ಒದ್ದಾಡಿ ಸಾವನ್ನಪ್ಪಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಸ್ಥಳೀಯರೊಬ್ಬರು ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಟ್ಟರಹಳ್ಳಿಯ ಗಾರ್ಡನ್ ಅವೆನ್ಯೂ ಬಡಾವಣೆಯ ಒಂದನೇ ಅಡ್ಡರಸ್ತೆಯಲ್ಲಿ ಜೂನ್ 18ರಂದು ಐದು ಬೀದಿನಾಯಿಗಳು ರಕ್ತವಾಂತಿಯಿಂದ ಸ್ಥಳದಲ್ಲಿಯೇ ಮೃತಪಟ್ಟಿವೆ. ಈ ಬೀದಿಯಲ್ಲಿ 10-12 ಬೀದಿ ನಾಯಿಗಳಿವೆ. ಉದ್ದೇಶಪೂರ್ವಕವಾಗಿಯೇ ನಾಯಿಗಳಿಗೆ ವಿಷಪ್ರಾಶನ ಮಾಡಿರುವ ಆರೋಪ ಕೇಳಿಬಂದಿದೆ‌. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಏಕಾಏಕಿ ನಾಯಿ ಬಿದ್ದು ನರಳುತಿತ್ತು‌.‌ ಸ್ಥಳೀಯ ವ್ಯಕ್ತಿಯೋರ್ವ ಕೂಡಲೇ ಗಮನಿಸಿ ನೀರು ನೀಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದೆ‌‌.‌ ಇನ್ನು ಉಳಿದ ಐದು ನಾಯಿಗಳು ಸಾವನ್ನಪ್ಪಿವೆ‌ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿಗೆ ಕಾರಣರಾದವರ ಪತ್ತೆಗೆ ಮುಂದಾಗಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮೃತ ನಾಯಿಯ ರಕ್ತದ ಮಾದರಿ ರವಾನಿಸಿದ್ದಾರೆ.