



ಡೈಲಿ ವಾರ್ತೆ: 30/JUNE/2025


ಬಿಬಿಎಂಪಿ ಕಸದ ಲಾರಿಯಲ್ಲಿ ಮಹಿಳೆ ಮೃತದೇಹ ಪತ್ತೆ ಪ್ರಕರಣ: ಕೊಲೆ ಮಾಡಿದ್ದ ಅಸ್ಸಾಂ ಮೂಲದ ಆರೋಪಿ ಬಂಧನ

ಬೆಂಗಳೂರು: ಮಹಿಳೆಯನ್ನ ಹತ್ಯೆಗೈದು ಮೃತದೇಹವನ್ನ ಕಸದ ಲಾರಿಯಲ್ಲಿ ಎಸೆದಿದ್ದ ಆರೋಪಿಯನ್ನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೃತಳನ್ನ ಆಶಾ (25) ಎಂದು ಗುರುತಿಸಲಾಗಿದ್ದು, ಆಕೆಯನ್ನ ಹತ್ಯೆ ಮಾಡಿದ್ದ ಅಸ್ಸಾಂ ಮೂಲದ ಶಂಶುದ್ದೀನ್ (33) ಎಂಬಾತನನ್ನ ಬಂಧಿಸಲಾಗಿದೆ.
ಜೂನ್ 29ರಂದು ಬೆಳಗ್ಗಿನ ಜಾವ 1:45ರ ಸುಮಾರಿಗೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ಬಿಬಿಎಂಪಿಯ ಕಸದ ಲಾರಿಯಲ್ಲಿ ಆಶಾಳ ಮೃತದೇಹ ಪತ್ತೆಯಾಗಿತ್ತು. ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಆಶಾ ಮತ್ತು ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ಶಂಶುದ್ದೀನ್ ಒಟ್ಟಿಗೆ ಹುಳಿಮಾವು ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಆಶಾಳಿಗೆ ಪತಿ ಮೃತಪಟ್ಟ ಬಳಿಕ ತನ್ನ ಇಬ್ಬರ ಮಕ್ಕಳೊಂದಿಗೆ ಶಂಶುದ್ದೀನ್ನೊಂದಿಗೆ ವಾಸವಿದ್ದಳು. ಇತ್ತ ಶಂಶುದ್ದೀನ್ ಸಹ ವಿವಾಹಿತನಾಗಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳು ಅಸ್ಸಾಂನಲ್ಲಿ ವಾಸವಿದ್ದರು. ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾದ ಇಬ್ಬರೂ ಒಂದೇ ಮನೆ ಪಡೆದು ವಾಸವಿದ್ದರು. ಆಶಾ ಶಂಶುದ್ದೀನ್ ನಡುವೆ ಇತ್ತೀಚೆಗೆ ಪದೇ ಪದೆ ಜಗಳವಾಗುತ್ತಿತ್ತು.
ಶನಿವಾರ ಜಗಳ ಅತಿರೇಕಕ್ಕೆ ಹೋದಾಗ ಶಂಶುದ್ದೀನ್ ಆಶಾಳ ಕತ್ತು ಹಿಸುಕಿ ಹತ್ಯೆ ಮಾಡಿದ್ದ. ಬಳಿಕ ಮಧ್ಯರಾತ್ರಿ ಮೃತದೇಹವನ್ನ ಬೈಕ್ನಲ್ಲಿಟ್ಟುಕೊಂಡು ಬಂದಿದ್ದ ಶಂಶುದ್ದೀನ್ ಕಸದ ಲಾರಿಯಲ್ಲಿಟ್ಟು ಪರಾರಿಯಾಗಿದ್ದ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಅಕ್ಕಪಕ್ಕದ ರಸ್ತೆಗಳ ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ತನಿಖೆಗಿಳಿದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು, ಕೆಲವೇ ಗಂಟೆಗಳೊಳಗೆ ಆರೋಪಿಯನ್ನ ಬಂಧಿಸಿರುವುದಾಗಿ ತಿಳಿಸಿದ್ದಾರೆ.