ಡೈಲಿ ವಾರ್ತೆ: 12/ಜುಲೈ/2025

ಪತ್ನಿಯಿಂದಲೇ ಪತಿ ಕೊಲೆ ಯತ್ನ: ಫೋಟೋ ತೆಗಿತೀನಿ ನಿಲ್ಲು ಎಂದು ಸೇತುವೆಯಿಂದ ತಳ್ಳಿದ ಕಿಲಾಡಿ ಮಹಿಳೆ.!

ರಾಯಚೂರು: ಪತ್ನಿಯೇ ಪತಿಯನ್ನು ನದಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ ಘಟನೆ ರಾಯಚೂರಿನ ಗುರ್ಜಾಪುರ ಸೇತುವೆ ಕಂ ಬ್ಯಾರೇಜ್ ಬಳಿ ನಡೆದಿದೆ.

ಪತಿಯ ಜೊತೆ ಬೈಕ್ ನಲ್ಲಿ ಬಂದಿದ್ದ ಪತ್ನಿ ಖತರ್ನಾಕ್ ಪ್ಲಾನ್ ಮಾಡಿದ್ದಾಳೆ. ಸೇತುವೆ ಮೇಲೆ ಫೋಟೋ ತೆಗೆಸಿಕೊಳ್ಳುವ ರೀತಿ ನಾಟಕ ಮಾಡಿದ ಪತ್ನಿ ಮೊದಲು ತಾನು ಫೋಟೋ ತೆಗೆಸಿಕೊಂಡಿದ್ದಾಳೆ.

ನಂತರ ಪತಿಯನ್ನು ಸೇತುವೆ ತುದಿಗೆ ನಿಲ್ಲಿಸಿ ತಳ್ಳಿದ್ದಾಳೆ. ನದಿಯ ಮಧ್ಯೆ ಈಜಿಕೊಂಡು ಬಂಡೆಯೊಂದರ ಮೇಲೆ ಪತಿ ಕುಳಿತುಕೊಂಡಿದ್ದಾನೆ. ಆತನ ಕಿರುಚಾಟ ಕೇಳಿದ ಅಕ್ಕಪಕ್ಕದಲ್ಲಿದ್ದವರು ಆಗಮಿಸಿ ರಕ್ಷಣೆ ಮಾಡಿದ್ದಾರೆ. ಸುಮಾರು 2 ಗಂಟೆಗಳ ಕಾಲ ನದಿಯಲ್ಲಿದ್ದ ಪತಿಯನ್ನು ಸ್ಥಳೀಯರು ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.

ರಾಯಚೂರು ಶಕ್ತಿನಗರದ ದಂಪತಿ ನಡುವೆ ಗಲಾಟೆಯಾಗಿದ್ದು, ಪತಿಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದ ಪತ್ನಿ ಫೋಟೋ ತೆಗೆಯುವ ನೆಪದಲ್ಲಿ ನದಿಗೆ ನೂಕಿದ್ದಾಳೆ ಎನ್ನಲಾಗಿದೆ.