ಡೈಲಿ ವಾರ್ತೆ: 13/ಆಗಸ್ಟ್/ 2025

ಉಡುಪಿ| ಆಡಿಯೋ ವೈರಲ್ ವಿಚಾರ – ಮನೆಗೆ ನುಗ್ಗಿ ವ್ಯಕ್ತಿಯ ಬರ್ಬರ ಹತ್ಯೆ: ಮೂವರು ಆರೋಪಿಗಳು ಪೊಲೀಸರಿಗೆ ಶರಣು

ಉಡುಪಿ: ಆಡಿಯೋವನ್ನು ವೈರಲ್ ಮಾಡಿದ ವಿಚಾರಕ್ಕಾಗಿ ಸ್ನೇಹಿತರೇ ಸೇರಿ ವ್ಯಕ್ತಿಯೊಬ್ಬರನ್ನು ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆಗೈದ ಘಟನೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಸುಬ್ರಮಣ್ಯನಗರ 9ನೇ ಅಡ್ಡರಸ್ತೆಯ ಲಿಂಗೋಟ್ಟುಗುಡ್ಡೆಯಲ್ಲಿ ಮಂಗಳವಾರ ನಡುರಾತ್ರಿ 11:15ರ ಸುಮಾರಿಗೆ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ವಿನಯ್ ದೇವಾಡಿಗ (40) ಎಂದು ಗುರುತಿಸಲಾಗಿದೆ.

ಕೊಲೆ ಆರೋಪಿಗಳಾದ ಬ್ರಹ್ಮಾವರ ಕೊಕ್ಕರ್ಣೆಯ ಗಾಂಧಿನಗರ ನಿವಾಸಿಗಳಾದ ಅಜಿತ್(28), ಅಕ್ಷೇಂದ್ರ (34) ಹಾಗೂ ಕೊಕ್ಕರ್ಣೆ ಬೆನಗಲ್ ನಿವಾಸಿ ಪ್ರದೀಪ್ ಆಚಾರ್ಯ(29) ಎಂಬವರು ಪೊಲೀಸರಿಗೆ ಶರಣಾಗಿದ್ದು ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ವಿನಯ್ ದೇವಾಡಿಗ ಪೈಂಟಿಂಗ್ ಕೆಲಸವನ್ನು ಮಾಡಿಕೊಂಡಿದ್ದು ಆ.12 ರಂದು ಬೆಳಿಗ್ಗೆ 10:00 ಗಂಟೆಗೆ ವಿನಯ್ ದೇವಾಡಿಗ ವೈಯಕ್ತಿಕ ಕೆಲಸದ ನಿಮಿತ್ತ ಉಡುಪಿ ಹೋಗಿ ವಾಪಸ್ಸು ಸಂಜೆ 6:30 ಗಂಟೆಗೆ ಮನೆಗೆ ಬಂದು ಕೋಣೆಯಲ್ಲಿ ಮಲಗಿದ್ದರು.

ಅವರ ಹೆಂಡತಿ ಸೌಮ್ಯಶ್ರೀ ರವರು ರಾತ್ರಿ 8:30 ಗಂಟೆಗೆ ಕೆಲಸವನ್ನು ಮುಗಿಸಿ ಮನೆಗೆ ಬಂದಿದ್ದು, ಆ ಸಮಯ ವಿನಯ್ ದೇವಾಡಿಗ ರವರ ಮೊಬೈಲ್ ಸಂಖ್ಯೆಗೆ ನಿರಂತರ ದೂರವಾಣಿ ಕರೆಗಳು ಬರುತ್ತಿತ್ತು. ಕರೆಯನ್ನು ಸ್ವೀಕರಿಸದೇ ಇದ್ದುದ್ದನ್ನು ಗಮನಿಸಿದ್ದ ಅವರ ಮಗಳು ನವ್ಯಾ ರವರು ತಂದೆಯ ಮೊಬೈಲ್ ನ್ನು ಸೈಲೆಂಟ್ ಮೋಡ್ ನಲ್ಲಿ ಇಟ್ಟಿರುತ್ತಾಳೆ. ನಂತರ ರಾತ್ರಿ 9:30 ಗಂಟೆಗೆ ಪತ್ನಿ ಸೌಮ್ಯಶ್ರೀ ಅವರು ವಿನಯ್ ರವರನ್ನು ಊಟ ಮಾಡುವುದಕ್ಕೆ ಏಬ್ಬಿಸಿದ್ದರು. ಆಗ ವಿನಯ್ ನನಗೆ ಸ್ವಲ್ಪ ಕೆಲಸವಿದೆ ನಾನು ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿದಕ್ಕೆ ಸೌಮ್ಯಶ್ರೀ ಅವರು ಈಗ ರಾತ್ರಿಯಾಯ್ತು ನಾಳೆ ಹೋಗಿ ಎಂದಿದ್ದಕ್ಕೆ ವಿನಯ್ ಒಪ್ಪಿಕೊಂಡು ಊಟ ಮಾಡಿ ರಾತ್ರಿ 10:00 ಗಂಟೆಗೆ ವಿನಯ್ ದೇವಾಡಿಗ ಹಾಗೂ ಸೌಮ್ಯಶ್ರೀ, ಮಗಳು ನವ್ಯಾರವರು ಮನೆಯ ಹಾಲ್ ಎದುರಿಗೆ ಇರುವ ಕೋಣೆಯಲ್ಲಿ ಮಲಗಿದ್ದು ಪಕ್ಕದ ಕೋಣೆಯಲ್ಲಿ ಅತ್ತೆ ಸುಕನ್ಯಾ ರವರು ಮಲಗಿರುತ್ತಾರೆ.

ಸಮಯ ರಾತ್ರಿ 11:15 ಗಂಟೆಗೆ ಮನೆಯ ಗೇಟನ್ನು ಯಾರೋ ತೆರದಂತೆ ಶಬ್ದವಾಗಿದ್ದು, ಮನೆಯ ದ್ವಾರಕ್ಕೆ ಕೈಯಿಂದ ಜೋರಾಗಿ ಬಡಿದ ಶಬ್ದ ಉಂಟಾಗಿದ್ದು, ಆನಂತರ ಸೌಮ್ಯಶ್ರೀ ಅವರು ಸುಕನ್ಯಾ ರವರನ್ನು ಎಬ್ಬಿಸಿ ಮನೆಯ ಬಾಗಿಲನ್ನು ತೆರೆದು ನೋಡಿದಾಗ ಸೌಮ್ಯಶ್ರೀ ಅವರಿಗೆ ಪರಿಚಯವಿದ್ದ ಆಕ್ಷೇಂದ್ರ, ಅಜಿತ್ ಮತ್ತು ಪರಿಚಯವಿಲ್ಲದ ಇನ್ನೊರ್ವ ವ್ಯಕ್ತಿಯು ಬೆನ್ನ ಹಿಂದೆ ಕೈಗಳನ್ನು ಕಟ್ಟಿ ”ವಿನಯ ಎಲ್ಲಿದ್ದಾನೆ, ವಿನಯ್ ಎಲ್ಲಿದ್ದಾನೆ” ಎಂದು ಕೇಳಿದ್ದಕ್ಕೆ ಸೌಮ್ಯ ವಿನಯ್ ರವರು ಮನೆಯಲ್ಲಿ ಇಲ್ಲ ಹೊರಗಡೆ ಹೋಗಿರುವುದಾಗಿ ತಿಳಿಸಿದರೂ ಕೂಡ ಸೌಮ್ಯಶ್ರೀ ಅವರ ಮಾತನ್ನು ಲೆಕ್ಕಿಸದೇ ಮೂವರು ಮನೆಯ ಒಳಗೆ ಬಂದಿದ್ದರು. ಅಕ್ಷೇಂದ್ರನ ಕೈಯಲ್ಲಿ ಮಚ್ಚು, ಅಜಿತ್ ನ ಕೈಯಲ್ಲಿ ದೊಡ್ಡ ಕತ್ತಿ ಹಾಗೂ ಇನ್ನೋರ್ವ ಅಪರಿಚಿತ ವ್ಯಕ್ತಿಯ ಕೈಯಲ್ಲಿ ಚಾಕು ಇದ್ದು, ಅವರುಗಳು ಮನೆಯ ಎಲ್ಲಾ ಕಡೆಗಳಲ್ಲಿ ವಿನಯ್ ಗಾಗಿ ಹುಡುಕಾಟ ನಡೆಸುತ್ತಿದ್ದಾಗ ಸೌಮ್ಯಶ್ರೀ ಅವರಲ್ಲಿ “ಏನಾದರೂ ತಪ್ಪಾಗಿದ್ದರೆ ನಾಳೆ ಮಾತನಾಡುವ , ಇವತ್ತು ಇಲ್ಲಿಂದ ಹೋಗಿ ಎಂದು ಹೇಳಿದರೂ ಅದನ್ನು ಲೆಕ್ಕಿಸದೇ ಮನೆಯ ಹಾಲ್ ನ ಎದುರು ಇದ್ದ ಕೋಣೆಯ ಬಾಗಿಲನ್ನು ತೆರೆದಿದ್ದರು, ಆ ಸಮಯ ಕೋಣೆಯಲ್ಲಿದ್ದ ವಿನಯ್ ರವರು ಬಾಗಿಲನ್ನು ತೆರೆದ ಶಬ್ದದಿಂದ ಎಚ್ಚರಗೊಂಡಿದ್ದು, ಆರೋಪಿತರು ವಿನಯ್ ಬಳಿ ಇದ್ದ ಮೊಬೈಲ್ ನ್ನು ಕಿತ್ತುಕೊಳ್ಳಲು ಪ್ರಯತ್ನಪಟ್ಟಿದ್ದು, ನಂತರ ಅಜಿತ್ ವಿನಯ್ ನನ್ನು ತಪ್ಪಿಸಿಕೊಳ್ಳದಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆ ಸಮಯ ಆಕ್ಷೇಂದ್ರನು ತಾನು ತಂದಿದ್ದ ಮಚ್ಚು ಹಾಗೂ ಇನ್ನೋರ್ವ ವ್ಯಕ್ತಿಯು ತಾನು ತಂದಿದ್ದ ಚಾಕುವಿನಿಂದ ವಿನಯ್ ದೇವಾಡಿಗ ರವರ ತಲೆಯನ್ನು ಕಡಿದಿದ್ದು,ಎರಡೂ ಕೈ ಮತ್ತು ಮೊಣಕೈಗಳಿಗೆ ಮತ್ತು ಅಲ್ಲಲ್ಲಿ ಚಾಕು ಮತ್ತು ಮಚ್ಚಿನಿಂದ ಕಡಿದು ಕೊಲೆ ಮಾಡಿದ್ದಾರೆ.
ಆ ಸಮಯ ಕೋಣೆಯಲ್ಲಿದ್ದ ಸೌಮ್ಯಶ್ರೀ ಅವರ ಮಗಳು ನವ್ಯಾ ರವರು ಹೆದರಿ ಓಡಿ ಹೊರಗೆ ಬಂದಿದ್ದು, ನಂತರ ಆರೋಪಿತರುಗಳು ಬಂದಿದ್ದ ಸ್ಕೂಟರ್ ನ್ನು ಸ್ಟಾರ್ಟ್ ಮಾಡಿಕೊಂಡು ರಾತ್ರಿ 11:30 ಗಂಟೆಗೆ ಸ್ಥಳದಿಂದ ಪರಾರಿಯಾಗಿರುತ್ತಾರೆ.

ಆರೋಪಿ ಅಕ್ಷೇಂದ್ರನಿಗೆ ಜೀವನ್ ಎಂಬಾತನು ಬೈದಿರುವ ಆಡಿಯೋವನ್ನು ವಿನಯ್ ದೇವಾಡಿಗ ಬೇರೆಯವರಿಗೆ ಶೇರ್ ಮಾಡಿ ವೈರಲ್ ಮಾಡಿರುವುದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.
ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.