


ಡೈಲಿ ವಾರ್ತೆ: 23/ಆಗಸ್ಟ್/ 2025


ಧರ್ಮಸ್ಥಳ ಪ್ರಕರಣ: ಅನಾಮಿಕ ಮುಸುಕುಧಾರಿಯ ಅಸಲಿ ಮುಖ, ಫೋಟೊ ಬಹಿರಂಗ – ಸತ್ಯ ಕಕ್ಕಿದ ಚಿನ್ನಯ್ಯ!

ಮಂಗಳೂರು: ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೊಂಡಿದ್ದ ಅನಾಮಿಕನ ಅಸಲಿ ಮುಖ ಈಗ ಅನಾವರಣಗೊಂಡಿದೆ.
ಮಾಸ್ಕ್ಮ್ಯಾನ್ ಸಿಎ ಚಿನ್ನಯ್ಯ ಅಲಿಯಾಸ್ ಚೆನ್ನ ಈತನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದಾರೆ.
ತಮಿಳುನಾಡಿನಲ್ಲಿ ಹಣದ ಆಮಿಷವೊಡ್ಡಿ ಧರ್ಮಸ್ಥಳಕ್ಕೆ ಕರೆಸಿದ್ದರು: ಸತ್ಯ ಕಕ್ಕಿದ ಚಿನ್ನಯ್ಯ:ವಿಶೇಷ ತನಿಖಾ ತಂಡ ತಮ್ಮ ಎಂದಿನ ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಚೆನ್ನಯ್ಯ ಸತ್ಯ ಕಕ್ಕಿ ತಪ್ಪೊಪ್ಪಿಕೊಂಡಿರುವ ವಿಚಾರ ಎಸ್ಐಟಿ ಮೂಲಗಳಿಂದ ತಿಳಿದು ಬಂದಿತ್ತು.
ಮೂಲಗಳ ಪ್ರಕಾರ ಧರ್ಮಸ್ಥಳಕ್ಕೆ ಬರುವ ಮೊದಲೇ ಮೂರು ಬಾರಿ ಈತನನ್ನು ತಂಡ ಭೇಟಿ ಮಾಡಿತ್ತು.
ಚಿನ್ನಯ್ಯ ಹೇಳಿದ್ದೇನು?
ಡಿಸೆಂಬರ್ ಕೊನೆಯ ವಾರದಲ್ಲಿ ತಮಿಳುನಾಡಿನಲ್ಲಿದ್ದ ನನ್ನನ್ನು ಧರ್ಮಸ್ಥಳ ದೇವಸ್ಥಾನದ ವಿರೋಧಿ ಗ್ಯಾಂಗ್ ಸಂಪರ್ಕಿಸಿತ್ತು. ಮಾತುಕತೆ ನಡೆಸುವ ವೇಳೆ ಹಣದ ಆಮಿಷ ಒಡ್ಡಿದ್ದರು. ಈ ಪ್ರಕರಣದ ಮುಖ್ಯ ನಾಯಕ ನೀನು. ನಿನ್ನಿಂದಲೇ ಈ ಪ್ರಕರಣಕ್ಕೆ ರೋಚಕ ತಿರುವು ಸಿಗುತ್ತದೆ ಎಂದು ಹೇಳಿದ್ದರು.
ಯಾವುದೇ ಕಾರಣಕ್ಕೂ ನೀನು ಭಯ ಪಡುವ ಅಗತ್ಯವಿಲ್ಲ. ತನಿಖೆಯಾದ ನಂತರ ಹಲವು ಜನ ದೂರುದಾರರು ಬರುತ್ತಾರೆ. ಎಲ್ಲ ತನಿಖೆ ನಡೆಯುತ್ತದೆ ಎಂದು ಭರವಸೆ ನೀಡಿದ್ದರು. ಆರಂಭದಲ್ಲಿ ಬೆಂಗಳೂರಿನಲ್ಲಿ ನನಗೆ ಸ್ವಲ್ಪ ತರಬೇತಿ ನೀಡಲಾಗಿತ್ತು. ಪೊಲೀಸರು ಕೇಳಿದಾಗ ಯಾವ ರೀತಿ ಉತ್ತರ ಹೇಳಬೇಕು ಎನ್ನುವುದನ್ನು ತಿಳಿಸಲಾಗಿತ್ತು. ನಂತರ ಸೂತ್ರಧಾರರು ಹೇಳಿದಂತೆ ನಾನು ಪಾತ್ರ ಮಾಡುತ್ತಿದ್ದೆ. ಅವರು ಹೇಳಿದಂತೆ ನಾನು ಮಾಹಿತಿ ನೀಡುತ್ತಿದ್ದೆ ಎಂದು ಚಿನ್ನಯ್ಯ ತಿಳಿಸಿದ್ದ.