


ಡೈಲಿ ವಾರ್ತೆ: 24/ಸೆ./2025


ಬೆಳಿಗ್ಗೆ ಅರ್ಚಕ, ರಾತ್ರಿ ಕಳ್ಳ: ಪ್ರತಿಷ್ಠಿತ ದೇವಾಲಯಗಳಲ್ಲಿ ಅರ್ಚಕನಾಗಿ ಪೂಜೆ, ರಾತ್ರಿ ಕಳ್ಳತನ – ಇಬ್ಬರ ಬಂಧನ

ಬೆಂಗಳೂರು: ಬೆಳಗಿನ ಜಾವ ದೇವಾಲಯಗಳಲ್ಲಿ ಅರ್ಚಕನಾದರೆ, ರಾತ್ರಿ ಕಳ್ಳತನಕ್ಕೆ ಇಳಿಯುತ್ತಿದ್ದ. ಜೈಲಿನಲ್ಲಿ ಪರಿಚಯವಾದ ಮತ್ತೊಬ್ಬ ಕಳ್ಳನ ಸಹವಾಸದಿಂದ ಚಿನ್ನಾಭರಣ ಕದ್ದು ಮಾರಾಟ ಮಾಡುತ್ತಿದ್ದ. ಪ್ರತಿಸಲ ಕಳ್ಳತನ ಮಾಡಿದ ನಂತರ ದೇವರ ಮುಂದೆ ಕ್ಷಮಿಸಿ ಎಂದು ಕೈಮುಗಿಯುತ್ತಿದ್ದರು. ಆದರೆ ದೇವರ ಶಾಪವೂ ಏನೋ ಸದ್ಯ ಇಬ್ಬರು ಅರೆಸ್ಟ್ ಆಗಿದ್ದಾರೆ.
ಆರೋಪಿಗಳಾದ ಅರ್ಚಕ ಪ್ರವೀಣ್ ಭಟ್ ಮತ್ತು ಸಂತೋಷ್ ಇಬ್ಬರು ಬಂಧಿತರು.
ಪ್ರವೀಣ್ ಭಟ್ ಬೆಳಗಿನ ಜಾವ ಉಡುಪಿ, ಶಿವಮೊಗ್ಗದ ಪ್ರತಿಷ್ಠಿತ ದೇವಾಲಯಗಳಲ್ಲಿ ಅರ್ಚಕನಾಗಿ ಪೂಜೆ ಮಾಡುತ್ತಿದ್ದ. ರಾತ್ರಿ ಆದರೆ ಸಾಕು ಅಲ್ಲಿದ್ದ ದೇವರ ಸಾಮಾಗ್ರಿಗಳನ್ನ ಕಳ್ಳತನ
ಮಾಡುತ್ತಿದ್ದ. ಜೈಲಿನಲ್ಲಿ ಪರಿಚಯವಾದ ಸಂತೋಷ್ನ ಸಹವಾಸದಿಂದ ಬೆಂಗಳೂರಿನ ಪ್ರಸಿದ್ಧ ದೇವಾಲಯಗಳಿಗೂ ಕನ್ನ ಹಾಕಿ ಸದ್ಯ ಪೋಲಿಸರ ಅತಿಥಿಯಾಗಿದ್ದಾರೆ.
ಪ್ರವೀಣ್ ಭಟ್ ಶಿವಮೊಗ್ಗ, ಉಡುಪಿಯಲ್ಲಿ ಅರ್ಚಕನಾಗಿದ್ದ. ಅಲ್ಲಿ ಹೋಮ, ಹವನ, ಪೂಜೆ ಮಾಡಿಕೊಂಡಿದ್ದ. ರಾತ್ರಿ ಅದೇ ದೇವಾಲಯದಲ್ಲಿ ದೇವರ ಬೆಳ್ಳಿ ಸಾಮಗ್ರಿಗಳು, ಹಿತ್ತಾಳೆ ವಸ್ತುಗಳು, ಚಿನ್ನಾಭರಣವನ್ನು ಕದ್ದು ಮಾರಾಟ ಮಾಡುತ್ತಿದ್ದ.
ಅರ್ಚಕನಾಗಿದ್ದರಿಂದ ಈ ವಸ್ತುಗಳನ್ನು ಕೊಂಡುಕೊಳ್ಳುವರು ಯಾವುದೇ ಅನುಮಾನ ಪಡುತ್ತಿರಲಿಲ್ಲ. ಮನೆಯಲ್ಲಿ ಕಷ್ಟಯಿದೆ, ಅಲ್ಲದೆ ಮನೆಯ ತುಂಬಾ ಇಂತಹ ವಸ್ತುಗಳೇ ಇವೆ ಎಂದು ಹೇಳುತ್ತಿದ್ದ. ಆದರೆ ಅದೊಂದು ದಿನ ಮಾತ್ರ ಕಳ್ಳತನ ಪ್ರಕರಣಗಳಲ್ಲಿ ಜೈಲು ಸೇರಿದ್ದ. ಹೀಗೆ ಜೈಲು ಸೇರಿದ ಪ್ರವೀಣ್ ಭಟ್ಗೆ ಸಂತೋಷ್ ಕೂಡ ಪರಿಚಯವಾಗಿದೆ. ಇಬ್ಬರು ಹೊರಗಡೆ ಬಂದು ಪಾರ್ಟ್ನರ್ಸ್ ಆಗಿದ್ದರು.
ಬನಶಂಕರಿ ದೇವಾಲಯದಲ್ಲಿ ಅರ್ಚಕನಾಗಿದ್ದಾಗ ಕೂಡ ಕಳ್ಳತನ ಮಾಡಿದ್ದ. ದೇವಾಲಯದ ಆಡಳಿತ ಮಂಡಳಿ ಪರಿಶೀಲನೆ ಮಾಡಿ, ಬಳಿಕ ಪೋಲಿಸರಿಗೆ ದೂರು ನೀಡಿದ್ದರು. ಬನ್ನೇರುಘಟ್ಟ ಸಮೀಪದ ಗೊಟ್ಟಿಗೇರೆ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಲಾಕ್ ಆಗಿದ್ದರು. ತನಿಖೆ ಮಾಡಿದಾಗ ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದು ಬಯಲಾಗಿತ್ತು.
14 ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳು ವಶಕ್ಕೆ
ಇನ್ನೂ ಕದ್ದ ಸಾಮಾಗ್ರಿಗಳನ್ನು ಅಂಗಡಿಗೆ ಮಾರಾಟ ಮಾಡಿದರೆ, ಮತ್ತೊಮ್ಮೆ ಆ ಕಡೆ ಅಂಗಡಿಗೆ ಹೋಗುತ್ತಿರಲಿಲ್ಲ. ಪಕ್ಕಾ ಪ್ಲ್ಯಾನ್ ಮಾಡಿಯೇ ಸ್ಕೆಚ್ ಹಾಕುತ್ತಿದ್ದರು. ಹೀಗೆ ಬಂಧಿತರಿಂದ 14 ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ ಇಬ್ಬರ ವಿರುದ್ಧ ಬನಶಂಕರಿ, ಜಯನಗರ, ಕುಮಾರಸ್ವಾಮಿ, ಜೆಪಿ ನಗರ ಸೇರಿ ಸುಮಾರು 11 ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಪೊಲಿಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.