ಡೈಲಿ ವಾರ್ತೆ: 29/ಅ./2025

ಬಂಟ್ವಾಳ| ಕಾರು ಡಿವೈಡರ್ ಗೆ ಡಿಕ್ಕಿ – ಓರ್ವ ಯುವಕ ಸಾವು, ನಾಲ್ವರಿಗೆ ಗಾಯ

ಬಂಟ್ವಾಳ: ಕಾರೊಂದು ನಿಯಂತ್ರಣ ಕಳೆದುಕೊಂಡು ಮೆಲ್ಕಾರ್ ಬಳಿ ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಕಡಬ ತಾಲೂಕಿನ ಸವಣೂರು ನಿವಾಸಿ ಕಾರ್ತಿಕ್ (23) ಮೃತಪಟ್ಟ ಯುವಕನಾಗಿದ್ದು, ಈತನ ಸ್ನೇಹಿತರಾದ ಸವಣೂರು ನಿವಾಸಿಗಳಾದ ಹರ್ಷಿತ್, ದೀಕ್ಷಿತ್, ಜಗದೀಶ್ ಮತ್ತು ನಿತಿನ್ ಎಂಬವರು ಗಾಯಗೊಂಡವರು.

ಕಾರ್ತಿಕ್ ಹಾಗೂ ಈತನ ನಾಲ್ಕು ಮಂದಿ ಸ್ನೇಹಿತರು ಅ. 28 ರಂದು ಮಂಗಳವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಕಂಪೆನಿಯೊಂದರ ಸಂದರ್ಶನಕ್ಕೆ ತೆರಳಿದ್ದರು. ಸಂಜೆ ವೇಳೆ ಕೆಲಸ ಮುಗಿಸಿ ವಾಪಸು ಊರಿಗೆ ತೆರಳುತ್ತಿದ್ದ ವೇಳೆ ಮೆಲ್ಕಾರ್ ನ ಮೇಲ್ಸೇತುವೆಯಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಚಾಲಕ ಸಹಿತ ಐದು ಮಂದಿಯನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡು ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರ್ತಿಕ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಪೋಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.