ಡೈಲಿ ವಾರ್ತೆ: 23/NOV/2025

ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ ದರೋಡೆ: ಕೋಟ್ಯಾಂತರ ರೂ.ಮೌಲ್ಯದ ಚಿನ್ನ ದೋಚಿದ ಕಳ್ಳರು

ಚಾಮರಾಜನಗರ: ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ರೂ. ದರೋಡೆ ನಡೆದಿದ್ದ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೊಂದು ರಾಬರಿ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಮಾರ್ಗದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಚಿನ್ನದ ವ್ಯಾಪಾರಿಯನ್ನ ಅಡ್ಡಗಟ್ಟಿ ದುಷ್ಕರ್ಮಿಗಳು ಕೋಟ್ಯಾಂತರ ರೂ. ಮೌಲ್ಯದ 1.2 ಕೆಜಿ ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಮೈಸೂರಿನ ಚಾಮರಾಜನಗರದ ಬಂಡಿಪುರ ಅರಣ್ಯ ಪ್ರದೇಶದ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ಚಿನ್ನದ ವ್ಯಾಪಾರಿಯೊಬ್ಬರು ಕೇರಳಕ್ಕೆ ತೆರಳಿದ್ದರು. ಈ ವೇಳೆ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು ಮಾರಕಾಸ್ತ್ರ ತೋರಿಸಿ, ಚಿನ್ನದ ವ್ಯಾಪಾರಿಯಿಂದ ನಗನಾಣ್ಯಗಳನ್ನು ದೋಚಿ ಪರಾರಿಯಾಗಿದ್ದಾರೆ.

ಕಾರಿನಲ್ಲಿ ಚಿನ್ನದ ನಾಣ್ಯ ತರುತ್ತಿರುವುದನ್ನು ಗಮನಿಸಿದ ದರೋಡೆಕೋರರು ಚಿನ್ನದ ವ್ಯಾಪಾರಿಯನ್ನು ಹಿಂಬಾಲಿಸಿಕೊಂಡು ಬಂದು ಕಾರನ್ನು, ಮಾರಕಾಸ್ತ್ರವನ್ನು ತೋರಿಸಿದ್ದಾರೆ. ಈ ವೇಳೆ ಚಿನ್ನದ ವ್ಯಾಪಾರಿ ಗಾಬರಿಗೊಂಡಿದ್ದಾನೆ. ಕಾರಿನಲ್ಲಿದ್ದ ಚಿನ್ನಗಳನ್ನು ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಇದೇ ಕೇರಳದ ದರೋಡೆ ಗ್ಯಾಂಗ್‌ ಸಕ್ರಿಯವಾಗಿರುವುದಾಗಿ ಚಿನ್ನದ ವ್ಯಾಪಾರಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ದೂರು ನೀಡಲು ವ್ಯಾಪಾರಿ ಮೊದಲಿನಿಂದಲೇ ಹಿಂಜರಿಯುತ್ತಿದ್ದರು. ಪ್ರಕರಣದ ಮಾಹಿತಿ ಸೋರಿಕೆಯಾದರೆ ಅಪಾಯವಾಗಬಹುದು ಎಂಬ ಆತಂಕದಿಂದ ಅವರು ದೂರು ಕೊಡಲು ವಿಳಂಬ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಪೊಲೀಸರ ಗದರಿಕೆಯ ನಂತರ ವ್ಯಾಪಾರಿ ಗುಂಡ್ಲುಪೇಟೆ ಪೊಲೀಸ್‌ ಠಾಣೆಗೆ ಬಂದು ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಸದ್ಯ, ಪೊಲೀಸರು ಚೆಕ್‌ಪೋಸ್ಟ್ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.