
ಡೈಲಿ ವಾರ್ತೆ: 06/DEC/2025
ಉಡುಪಿ: SCDCC ಬ್ಯಾಂಕ್ ವತಿಯಿಂದ ಪೊಲೀಸ್ ಇಲಾಖೆಗೆ ಹೊಸ ಜೀಪ್ ಹಸ್ತಾಂತರ

ಉಡುಪಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಉಡುಪಿ ಜಿಲ್ಲಾ ಪೊಲೀಸರಿಗೆ ಬೋಲೇರೋ ವಾಹನವನ್ನು ಕೊಡುಗೆಯಾಗಿ ಹಸ್ತಾಂತರ ಮಾಡಿದೆ.
ಉಡುಪಿ ಎಸ್ಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಹೊಸ ವಾಹನಕ್ಕೆ ಹಸಿರು ನಿಶಾನೆ ತೋರಿ, ಎಸ್ ಪಿ ಹರಿರಾಮ್ ಶಂಕರ್ ಅವರಿಗೆ ಕೀಲಿಕೈ ಹಸ್ತಾಂತರ ಮಾಡಿದರು.
ಪೊಲೀಸ್ ಇಲಾಖೆ ಹಲವಾರು ವಾಹನಗಳು 15 ವರ್ಷವನ್ನು ಪೂರೈಸಿದ್ದು, ಕೆಲ ವಾಹನಗಳು ದುರಸ್ತಿಯಲ್ಲಿ ಇರುವುದರಿಂದ ಇಲಾಖೆಗೆ ಕರ್ತವ್ಯ ನಿರ್ವಹಿಸಲು ಸಮಸ್ಯೆ ಆಗುತ್ತಿತ್ತು. ಎಸ್ ಸಿಡಿಸಿಸಿ ಬ್ಯಾಂಕ್ ಸಿಎಸ್ಆರ್ ಫಂಡ್ ಮೂಲಕ ವಾಹನ ಒದಗಿಸಲು ಇಲಾಖೆ ಮನವಿ ಸಲ್ಲಿಸಿತ್ತು. ಪೊಲೀಸ್ ಇಲಾಖೆ ಬ್ಯಾಂಕ್ ಅಧ್ಯಕ್ಷರಿಗೆ ಸನ್ಮಾನಿಸಿ ಧನ್ಯವಾದ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಂ ಎನ್ ರಾಜೇಂದ್ರಕುಮಾರ್, ರಾಜ್ಯ ಸರ್ಕಾರದ ಇಲಾಖೆಗಳಲ್ಲೇ ಪೊಲೀಸ್ ಇಲಾಖೆ ಬಹಳಷ್ಟು ಸವಾಲುಗಳನ್ನು ಎದುರಿಸಿಕೊಂಡು ಕೆಲಸ ಮಾಡುತ್ತದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸ್ ಇಲಾಖೆಯ ದೊಡ್ಡ ಜವಾಬ್ದಾರಿ. ಮನವಿ ಬಂದಾಗ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಗೆ ನಮ್ಮ ಬ್ಯಾಂಕ್ ವತಿಯಿಂದ ವಾಹನವನ್ನು ಒದಗಿಸಿತ್ತು. ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯವರು ಕೂಡ ಪತ್ರ ಬರೆದಿದ್ದರು.ಅವರ ಪತ್ರಕ್ಕೆ ಸ್ಪಂದಿಸಿ ಬಹಳ ಸಂತಸದಿಂದ ನಾವು ವಾಹನ ನೀಡಲು ಒಪ್ಪಿಕೊಂಡೆವು ಎಂದು ಹೇಳಿದರು.