ಡೈಲಿ ವಾರ್ತೆ: 18/DEC/2025

ಬ್ರಹ್ಮಾವರ| ಅಕ್ಷತಾ ಪೂಜಾರಿ ಮೇಲೆ ಪೊಲೀಸ್ ದೌರ್ಜನ್ಯಆರೋಪ – ಸಾರ್ವಜನಿಕರಿಂದ ಪ್ರತಿಭಟನೆ, ಪೊಲೀಸರು ಸೇರಿ 5 ಮಂದಿ ಮೇಲೆ ಎಫ್ಐಆರ್ ದಾಖಲು

ಬ್ರಹ್ಮಾವರ: ನ್ಯಾಯಾಲಯದ ಆದೇಶ ಪಾಲನೆಯ ನೆಪದಲ್ಲಿ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪುರಿನಲ್ಲಿ ನಸುಕಿನ ವೇಳೆ ಮನೆಗೆ ನುಗ್ಗಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಬುಧವಾರ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಮತ್ತು ಸಾರ್ವಜನಿಕರು ತೀರಾ ಆಕ್ರೋಶ ವ್ಯಕ್ತ ಪಡಿಸಿ ಪೊಲೀಸ್‌ ಠಾಣೆಯ ಮುಂದೆ ಪ್ರತಿಭಟನೆ ಮಾಡಿದರು.

ಸಹಸ್ರಾರು ಮಂದಿ ಇಲ್ಲಿನ ನಾರಾಯಣ ಗುರು ಮಂದಿರದಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಮೌನ ಮೆರವಣಿಗೆಯಲ್ಲಿ ಸಾಗಿ ಬಂದು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಎಂದು ಪಟ್ಟು ಹಿಡಿದು ಸಂಜೆ ತನಕ ಪ್ರತಿಭಟನೆ ಮುಂದುವರಿಸಿದರು.

ಉಡುಪಿ ಡಿವೈ ಎಸ್ ಪಿ ಪ್ರಭು ಡಿ.ಟಿ., ಎಡಿಶನಲ್ ಎಸ್ಪಿ ಸುಧಾಕರ ನಾಯಕ್ ಮತ್ತು ಅಪರ ಜಿಲ್ಲಾಧಿಕಾರಿ ಆಭಿದ್ ಗದ್ಯಾಳ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರೂ ಪಟ್ಟು ಬಿಡದ ಪ್ರತಿಭಟನಾಕಾರರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಘಟನೆಯ ಸ್ಥಳಕ್ಕೆ ಆಗಮಿಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಎಫ್ ಐಆರ್ ದಾಖಲಿಸದ ಹೊರತು ಕದಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಹರಿರಾಮ್ ಶಂಕರ್ ಬ್ರಹ್ಮಾವರ ಠಾಣೆಯಲ್ಲಿ ಪ್ರತಿಭಟನಾಕಾರರ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಅಕ್ಷತಾ ಮತ್ತು ಅವಳ ತಾಯಿಯ ಮೇಲೆ ದೌರ್ಜನ್ಯ ಮಾಡಿದ 5 ಮಂದಿ ಪೊಲೀಸರ ಮೇಲೆ ಎಫ್ ಐಆರ್ ದಾಖಲಿಸಿ ದಾಖಲೆಯ ಪ್ರತಿಯನ್ನು ನೀಡಿದ ಬಳಿಕ ಪ್ರತಿಭಟನೆ ಅಂತ್ಯ ಕಂಡಿತು.

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್‌ ಪೂಜಾರಿ, ಮಾಜಿ ಉಡುಪಿ ಜಿಲ್ಲಾ ಪಂಚಾಯತಿ ಸದಸ್ಯೆ ಗೀತಾಂಜಲಿ ಸುವರ್ಣ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಸೇರಿದಂತೆ ರಾಜಕೀಯ ಪಕ್ಷಬೇಧ ಮರೆತು ಅನೇಕರು ಪ್ರತಿಭಟನೆಯಲ್ಲಿದ್ದರು.