



ಡೈಲಿವಾರ್ತೆ:24/ಏಪ್ರಿಲ್ /2026

ಬೈಂದೂರು: ಬೀಗ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು – 6 ಲಕ್ಷ ನಗದು ಹಣ ಲೂಟಿ

ಬೈಂದೂರು: ಪಟ್ಟಣದ ಎಸ್ಬಿಐ ಬ್ಯಾಂಕ್ ಸಮೀಪದ ವಾಸಸ್ಥಳದಲ್ಲಿ ನಡೆದ ದರೋಡೆ ಪ್ರಕರಣ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ರಾಜಸ್ಥಾನ ಮೂಲದ ರಾವಲ್ ಸಿಂಗ್ (31) ಅವರು ನೀಡಿದ ದೂರಿನ ಮೇರೆಗೆ, ಅಪರಿಚಿತ ಕಳ್ಳರು ಮನೆ ಬೀಗ ಮುರಿದು ಒಳನುಗ್ಗಿ ಸುಮಾರು 6 ಲಕ್ಷ ರೂ. ನಗದು ಹಣ ಕಳವು ಮಾಡಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ರಾವಲ್ ಸಿಂಗ್ ಅವರು ಬೈಂದೂರು ಎಸ್ಬಿಐ ಮತ್ತು ನಾಗೂರು ಕೆನರಾ ಬ್ಯಾಂಕ್ ಸಮೀಪ ಇಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ಅಂಗಡಿ ನಡೆಸುತ್ತಿದ್ದು, ಕಳೆದ 2–3 ದಿನಗಳಿಂದ ಎಟಿಎಂ ಡೆಪಾಸಿಟ್ ಯಂತ್ರ ದೋಷದಿಂದ ಕಾರ್ಯನಿರ್ವಹಿಸದ ಹಿನ್ನೆಲೆ ಅಂಗಡಿಯಲ್ಲಿ ಸಂಗ್ರಹವಾಗಿದ್ದ ಹಣವನ್ನು ಬ್ಯಾಂಕ್ಗೆ ಜಮಾ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆರು ಲಕ್ಷ ರೂಪಾಯಿ ನಗದು ಹಣವನ್ನು ಮನೆಯಲ್ಲಿ ಗೋಡ್ರೇಜ್ ಲಾಕರ್ನಲ್ಲಿ ಸುರಕ್ಷಿತವಾಗಿ ಇಡಲಾಗಿತ್ತು.
ಆದರೆ, ಏಪ್ರಿಲ್ 23ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆಯ ನಡುವಿನ ಅವಧಿಯಲ್ಲಿ, ಕಳ್ಳರು ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಒಳನುಗ್ಗಿ, ಲಾಕರ್ನಲ್ಲಿ ಇಡಲಾಗಿದ್ದ ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಾಧ ಕ್ರಮಾಂಕ 41/2026 ಅಡಿಯಲ್ಲಿ BNS ಕಲಂ 331(3), 331(4) ಮತ್ತು 305 ಪ್ರಕಾರ ತನಿಖೆ ಆರಂಭಿಸಲಾಗಿದೆ. ಕಳ್ಳರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ