ಡೈಲಿವಾರ್ತೆ: 12/ಮೇ/2026

ಮಾಜಿ ಶಾಸಕ ಜೀವರಾಜ್‌ ವಿರುದ್ಧ ‘ಮತ ಡಕಾಯಿತಿ’ ಆರೋಪ: ತನಿಖೆಗೆ ಕಾಂಗ್ರೆಸ್ ಮುಖಂಡ ಕೋಟ ನಾಗೇಂದ್ರ ಪುತ್ರನ್ ಆಗ್ರಹ

​ಉಡುಪಿ: ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಡಿ.ಎನ್. ಜೀವರಾಜ್ ಅವರು ಅಧಿಕಾರದ ಲಾಲಸೆಯಿಂದ ಅಕ್ರಮ ಹಾದಿ ಹಿಡಿದಿದ್ದು, ‘ಮತ ಡಕಾಯಿತಿ’ ನಡೆಸಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

​ಜೀವರಾಜ್ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ತಕ್ಷಣವೇ ಕ್ಷೇತ್ರದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
​ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಧಿಕಾರಕ್ಕಾಗಿ ಇಷ್ಟು ಕೆಳಮಟ್ಟದ ಕೆಲಸವನ್ನು ಯಾರೂ ಮಾಡಿರಲಿಲ್ಲ. ಮತಪೆಟ್ಟಿಗೆಗೆ ಸಂಬಂಧಿಸಿದ ಅಕ್ರಮಗಳಲ್ಲಿ ಭಾಗಿಯಾಗಿರುವ ಜೀವರಾಜ್ ಅವರು, ಶಾಸಕ ಪದವಿಗಾಗಿ ಎಂತಹ ಹಂತಕ್ಕೆ ಬೇಕಾದರೂ ಇಳಿಯಬಲ್ಲರು ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಚುನಾವಣೆಯಲ್ಲಿ ಸೋತ ನಂತರ ಮುಂದಿನ ಚುನಾವಣೆಗೆ ಸಜ್ಜಾಗಬೇಕೇ ಹೊರತು ಇಂತಹ ಅಡ್ಡದಾರಿಗಳ ಮೂಲಕ ವಿಧಾನಸಭೆ ಪ್ರವೇಶಿಸಲು ಯತ್ನಿಸುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಪುತ್ರನ್ ಟೀಕಿಸಿದ್ದಾರೆ.

​ಬಿಜೆಪಿ ಏಜೆಂಟ್‌ಗಳಿಂದಲೇ ಸತ್ಯದರ್ಶನ:
​ಕ್ಷೇತ್ರದಲ್ಲಿ ಮತ ಡಕಾಯಿತಿ ನಡೆದಿರುವುದು ಸತ್ಯ ಎಂದು ಸ್ವತಃ ಬಿಜೆಪಿಯ ಏಜೆಂಟ್ ಅವರೇ ದೇವರ ಮುಂದೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜೀವರಾಜ್ ಅವರನ್ನು ಕೂಡಲೇ ಬಂಧಿಸಬೇಕು. ಉನ್ನತ ಮಟ್ಟದ ತನಿಖಾಧಿಕಾರಿಗಳ ಮೇಲೆ ಯಾವುದೇ ರಾಜಕೀಯ ಪ್ರಭಾವ ಬೀಳದಂತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
​ಇದೇ ವೇಳೆ ಸ್ಥಳೀಯ ಲೋಕಸಭಾ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಸದರು ಇತ್ತೀಚೆಗೆ ಮಾಡುತ್ತಿರುವ ಕೆಲಸಗಳ ಬಗ್ಗೆ ನಮಗೆ ಗೌರವವಿದೆ. ಆದರೆ, ಜೀವರಾಜ್ ನನ್ನ ಸ್ನೇಹಿತ ಎಂಬ ಕಾರಣಕ್ಕೆ ಈ ರೀತಿಯ ‘ಡಕಾಯಿತಿ’ ಕೃತ್ಯಕ್ಕೆ ಸರಳ ಸಜ್ಜನ ಸಂಸದರು ಸಾಥ್ ನೀಡಬಾರದು ಎಂದು ಮನವಿ ಮಾಡಿದ್ದಾರೆ.

​ರಾಜಕೀಯ ವ್ಯವಸ್ಥೆಯನ್ನು ಹದಗೆಡಿಸುತ್ತಿರುವ ಇಂತಹ ಪ್ರವೃತ್ತಿಗಳಿಗೆ ಅಂಕುಶ ಹಾಕಲು ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರಿಕಾ ಹೇಳಿಕೆಯ ಮೂಲಕ ಒತ್ತಾಯಿಸಿದ್ದಾರೆ.