



ಡೈಲಿವಾರ್ತೆ: 17/ಮೇ/2026

ಗಂಗೊಳ್ಳಿ: ವ್ಯವಹಾರದ ಹಿನ್ನೆಲೆ ಯುವಕನ ಮೇಲೆ ಹಲ್ಲೆ ಹಾಗೂ ಕೊಲೆ ಯತ್ನ; ಮೂವರ ವಿರುದ್ಧ ಪ್ರಕರಣ ದಾಖಲು

ಕುಂದಾಪುರ: ವ್ಯವಹಾರದ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೋರ್ವನಿಗೆ ಅವಾಚ್ಯ ಶಬ್ದಗಳಿಂದ ಬೈದು, ಕಬ್ಬಿಣದ ರಾಡ್ನಿಂದ ಕೊಲೆಗೆ ಯತ್ನಿಸಿ, ಜೀವ ಬೆದರಿಕೆ ಹಾಕಿರುವ ಗಂಭೀರ ಘಟನೆ ಹಂಗಳುರು ಗ್ರಾಮದ ತ್ರಾಸಿ ಆನುಗೋಡು ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಹಂಗಳುರು ಗ್ರಾಮದ ವನದುರ್ಗಿ ನಿಲಯದ ನಿವಾಸಿ ನಾಗರಾಜ ಜೋಗಿ (27) ಎಂಬವರು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರದೀಪ್ ಹೆಮ್ಮಾಡಿ, ಆದಿತ್ಯ ಶೆಟ್ಟಿ ಮತ್ತು ಶ್ರೀಕಾಂತ ಮೊಗವೀರ ಎಂಬವರ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಘಟನೆಯ ಹಿನ್ನೆಲೆ:
ದಿನಾಂಕ 16/05/2026 ರಂದು ಬೆಳಿಗ್ಗೆ 08:30 ರ ಸುಮಾರಿಗೆ ಫಿರ್ಯಾದುದಾರರಾದ ನಾಗರಾಜ ಜೋಗಿ ಅವರು ತಮ್ಮ ಬೈಕಿನಲ್ಲಿ ವ್ಯವಹಾರದ ನಿಮಿತ್ತ ತ್ರಾಸಿ ಗ್ರಾಮದ ಆನುಗೋಡು ರಸ್ತೆ ಬದಿಯಲ್ಲಿ ನಿಂತಿದ್ದಾಗ, ಅಲ್ಲಿಗೆ ಬಂದ ಆಪಾದಿತರಾದ ಪ್ರದೀಪ್, ಆದಿತ್ಯ ಮತ್ತು ಶ್ರೀಕಾಂತ ರವರು ಜಗಳ ತೆಗೆದಿದ್ದಾರೆ. ನಿನ್ನದು ಜಾಸ್ತಿಯಾಯಿತು ಎಂದು ಹೇಳಿ ಅವಾಚ್ಯವಾಗಿ ನಿಂದಿಸಿದಲ್ಲದೆ ನಾಗರಾಜ ಅವರನ್ನು ಬೈಕಿನಿಂದ ಕೆಳಗೆ ತಳ್ಳಿದ್ದಾರೆ ಎನ್ನಲಾಗಿದೆ.
ಈ ವೇಳೆ ಆಪಾದಿತ ಪ್ರದೀಪ ಎಂಬಾತನು ಕೊಲೆ ಮಾಡುವ ಉದ್ದೇಶದಿಂದ ನಾಗರಾಜ ಅವರ ತಲೆಗೆ ಕಬ್ಬಿಣದ ರಾಡ್ನಿಂದ ಬಲವಾಗಿ ಬೀಸಿದ್ದಾನೆ. ತಕ್ಷಣ ಜಾಗರೂಕರಾದ ನಾಗರಾಜ ಅವರು ತಪ್ಪಿಸಿಕೊಂಡ ಕಾರಣ, ರಾಡ್ನ ಏಟು ಅವರ ಗಲ್ಲಕ್ಕೆ ತಗುಲಿ ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಉಳಿದ ಆರೋಪಿಗಳು ನಾಗರಾಜ ಅವರ ಮೇಲೆ ಮುಗಿಬಿದ್ದು ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ.
ಹಲ್ಲೆಯ ಸಂದರ್ಭದಲ್ಲಿ ಆರೋಪಿಗಳು ಇವತ್ತು ನೀನು ಬದುಕಿದ್ದೀಯಾ, ಮುಂದಕ್ಕೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಸಾರ್ವಜನಿಕವಾಗಿ ಪ್ರಾಣ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳು ನಾಗರಾಜ ಸದ್ಯ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಭೀಕರ ಹಲ್ಲೆಯ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 27/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಕಲಂ: 352, 109, 115(2), 351(2) ಜೊತೆಗೆ 3(5) BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.