ಡೈಲಿವಾರ್ತೆ: 18/ಜೂ./2026

ಕುಂದಾಪುರ: ಓಮ್ನಿ ಕಾರು ಡಿಕ್ಕಿ – ಪಾದಚಾರಿ ಮಹಿಳೆ ಸಾವು, ಚಾಲಕನ ವಿರುದ್ಧ ಪ್ರಕರಣ ದಾಖಲು

​ಕುಂದಾಪುರ: ತಾಲೂಕಿನ ಬೀಜಾಡಿ ಗ್ರಾಮದ ಅರಸರ ಬೆಟ್ಟು ಕ್ರಾಸ್ ಬಳಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಓಮ್ನಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಜೂನ್ 18 ರಂದು ಗುರುವಾರ ಸಂಭವಿಸಿದೆ.

ಮೃತಪಟ್ಟ ಮಹಿಳೆಯನ್ನು ಗೋಪಾಡಿ ಗ್ರಾಮದ ಚಂದ್ರಮತಿ (78) ಎಂದು ಗುರುತಿಸಲಾಗಿದೆ.

ಘಟನೆ ವಿವರ:
ಗುರುವಾರ ಬೆಳಿಗ್ಗೆ 8:00 ಗಂಟೆಯ ವೇಳೆಗೆ ಚಂದ್ರಮತಿ ಅವರು ಬೀಜಾಡಿ ಗ್ರಾಮದ ಅರಸರ ಬೆಟ್ಟು ಕ್ರಾಸ್ ಬಳಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಕುಂಭಾಶಿ ಕಡೆಯಿಂದ ಕೋಟೇಶ್ವರ ರಥಬೀದಿ ಕಡೆಗೆ ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರಿನ ಚಾಲಕ ರಾಘವೇಂದ್ರ ಎಂಬಾತ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ರಸ್ತೆಯಲ್ಲಿದ್ದ ವೃದ್ಧೆಗೆ ಹಿಂದಿನಿಂದ ಬಲವಾಗಿ ಡಿಕ್ಕಿ ಹೊಡೆದಿದ್ದಾನೆ.

​ಅಪಘಾತದ ತೀವ್ರತೆಗೆ ಚಂದ್ರಮತಿ ಅವರ ತಲೆಗೆ ಗಂಭೀರ ಸ್ವರೂಪದ ರಕ್ತಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದಾರೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಎನ್. ಆರ್. ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಅಲ್ಲಿನ ವೈದ್ಯರು ಪರೀಕ್ಷಿಸಿ ಚಂದ್ರಮತಿ ಅವರು ಅದಾಗಲೇ ಮೃತಪಟ್ಟಿರುವುದಾಗಿ ದೃಢೀಕರಿಸಿದ್ದಾರೆ.

​ಈ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಮೃತರ ಸೋದರಳಿಯ ಮೋಹನ್ ನೀಡಿದ ದೂರಿನ ಮೇರೆಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಆಪಾದಿತ ಕಾರು ಚಾಲಕ ರಾಘವೇಂದ್ರನ ವಿರುದ್ಧ ಅಪರಾಧ ಕ್ರಮಾಂಕ 49/2026, ಕಲಂ: 281 ಹಾಗೂ 106(1) BNS (ಭಾರತೀಯ ನ್ಯಾಯ ಸಂಹಿತೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.