ಡೈಲಿವಾರ್ತೆ: 30/ಜೂ./2026

​ನಾಡುಬಾಂಬ್ ಸ್ಫೋಟಿಸಿ ಪ್ರೇಮಿ ಆತ್ಮಹತ್ಯೆ ಪ್ರಕರಣ: ಮೂವರನ್ನು ವಶಕ್ಕೆ ಪಡೆದ ಪೊಲೀಸರು – 60ಕ್ಕೂ ಹೆಚ್ಚು ಜನರ ವಿಚಾರಣೆ

ಅಂಕೋಲಾ: ತುಮಕೂರಿನಲ್ಲಿ ನಾಡುಬಾಂಬ್‌ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ‘ಪಾಗಲ್‌ ಪ್ರೇಮಿ’ ನಾಗೇಂದ್ರನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲ ಮತ್ತು ತುಮಕೂರು ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಅತ್ಯಂತ ಗಂಭೀರವಾಗಿ ಪರಿಗಣಿಸಲ್ಪಟ್ಟಿರುವ ಈ ತನಿಖೆಯ ಭಾಗವಾಗಿ ಈಗಾಗಲೇ ಸುಮಾರು 60ಕ್ಕೂ ಹೆಚ್ಚು ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಪೈಕಿ ಮೂವರು ಪ್ರಮುಖ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

​ಹೊನ್ನಾವರದ ಚಂದಾವರ ಮೂಲದ ಒಬ್ಬ ಹಾಗೂ ಸರಳೆಬೈಲಿನ ಇಬ್ಬರು ವ್ಯಕ್ತಿಗಳನ್ನು ಸದ್ಯ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ನಾಗೇಂದ್ರನಿಗೆ ಇವರೇ ನಾಡುಬಾಂಬ್ ತಯಾರಿಸಿ ಕೊಟ್ಟಿದ್ದಾರೆ ಎಂಬ ಬಲವಾದ ಶಂಕೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

​ಮೃತ ನಾಗೇಂದ್ರನ ಸ್ನೇಹಿತರು ಹಾಗೂ ಆಪ್ತ ಸಂಬಂಧಿಗಳನ್ನು ಪೊಲೀಸರು ಸುದೀರ್ಘ ವಿಚಾರಣೆ ನಡೆಸಿದಾಗ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ನಾಗೇಂದ್ರ ಈ ಮೂವರಿಂದಲೇ ನಾಡುಬಾಂಬ್‌ ಖರೀದಿಸಿರುವುದು ತನಿಖೆಯ ವೇಳೆ ದೃಢಪಟ್ಟಿದೆ.

ತನಿಖಾ ಸಂಸ್ಥೆಗಳಿಗೆ ಯಾವುದೇ ಡಿಜಿಟಲ್ ಸಾಕ್ಷ್ಯ ಸಿಗಬಾರದು ಎಂಬ ಉದ್ದೇಶದಿಂದ ನಾಗೇಂದ್ರ ಅಪ್ರತಿಮ ಚಾಣಾಕ್ಷತನ ಪ್ರದರ್ಶಿಸಿದ್ದಾನೆ. ಬಾಂಬ್ ಖರೀದಿ ಪ್ರಕ್ರಿಯೆಯ ವೇಳೆ ಆತ ಎಲ್ಲೂ ತನ್ನ ಮೊಬೈಲ್ ಫೋನ್ ಬಳಕೆ ಮಾಡಿರಲಿಲ್ಲ. ಬದಲಿಗೆ, ಬಾಂಬ್ ತಯಾರಕರನ್ನು ಖುದ್ದು ಭೇಟಿಯಾಗಿ, ಮುಖಾಮುಖಿ ಮಾತುಕತೆ ನಡೆಸಿ ವ್ಯವಹಾರ ಮುಗಿಸಿದ್ದ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

​ಪ್ರಕರಣದ ಗಾಂಭೀರ್ಯತೆಯನ್ನು ಅರಿತು ಅಂಕೋಲ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ತುಮಕೂರು ಪೊಲೀಸರು ಜಂಟಿಯಾಗಿ ಈ ವಿಶೇಷ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದ್ದಾರೆ. ಸದ್ಯ ವಶಕ್ಕೆ ಪಡೆದಿರುವ ಮೂವರನ್ನು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಅಕ್ರಮ ಬಾಂಬ್ ತಯಾರಿಕೆಯ ಜಾಲದ ಹಿಂದೆ ಬೇರೆ ಯಾರಿದ್ದಾರೆ ಮತ್ತು ಇವರ ಬಳಿ ಇನ್ನು ಎಷ್ಟು ಸ್ಫೋಟಕಗಳಿವೆ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.