ಡೈಲಿ ವಾರ್ತೆ : 29 ಜೂನ್ 2022

✒️ ಓಂಕಾರ ಎಸ್. ವಿ. ತಾಳಗುಪ್ಪ

ಶಿವಮೊಗ್ಗ : ಸಂಸದ ಬಿ.ವೈ.ರಾಘವೇಂದ್ರ ಅವರ ಅಪೇಕ್ಷೆಯಂತೆ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿಚ್ಚಿಸುವ ಪ್ರವಾಸಿಗರಿಗೆ ವಿಶೇಷವಾಗಿ ಜಲಕ್ರೀಡೆ ಮತ್ತು ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸುವವರಿಗಾಗಿ ಶಿವಮೊಗ್ಗ ಸಮೀಪದ ಸಕ್ರೆಬೈಲಿನಲ್ಲಿ ಜುಲೈ 11 ರಂದು ಬೋಟಿಂಗ್ ಸ್ಪೋರ್ಟ್ಸ್ನ್ನು ಆರಂಭಿಸಲಾಗುತ್ತಿದೆ ಎಂದು ರಾಜ್ಯ ಜಂಗಲ್ ರೆಸಾರ್ಟ್ ನಿಗಮದ ಸದಸ್ಯ ರಾಜೇಶ್ ಕಾಮತ್ ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.

ಜಂಗಲ್ ರೆಸಾರ್ಟ್ ನಿಗಮದ ವತಿಯಿಂದ ಜಲಕ್ರೀಡೆ ಹಾಗೂ ಸಾಹಸ ಚಟುವಟಿಕೆಗಳ ಕ್ರೀಡಾ ಕೇಂದ್ರವನ್ನು ಜುಲೈ 1ರಂದು ಸಂಸದ ಬಿ.ವೈ.ರಾಘವೇಂದ್ರ ಅವರು ಲೋಕಾರ್ಪಣೆಗೊಳಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.

ಸಕ್ರೆಬೈಲಿನ ಆನೆಗಳ ಬಿಡಾರದ ಜೊತೆಗೆ ಇಲ್ಲಿನ ಹಿನ್ನೀರಿನ ವಿಹಂಗಮ ನೋಟವನ್ನು ಆಸ್ವಾದಿಸುವುದು ಮಾತ್ರವಲ್ಲ ಜಲಕ್ರೀಡೆಗಳಲ್ಲಿ ಭಾಗವಹಿಸಬಹುದಾಗಿದೆ. ಇಲ್ಲಿನ ಸುಂದರ ವಾತಾವರಣ ಮನಮೋಹಕವಾಗಿದ್ದು, ಪ್ರವಾಸಿಗರನ್ನು ಸಂತಸಪಡಿಸಲಿದೆ. ಇಲ್ಲಿನ ಶುದ್ಧ ಗಾಳಿ, ನೀರು, ಅಷ್ಟಾಗಿ ಇರದ ಜನಜಂಗುಳಿ ವಾತಾವರಣ ಇದೆಲ್ಲವೂ ಪ್ರವಾಸಿಗರನ್ನು ಆಕರ್ಷಿಸಲಿದೆ. ಇದು ಆಗಮಿಸುವ ಪ್ರವಾಸಿಗರಿಗೆ ಆಪ್ಯಾಯಮಾನವಾಗಿರಲಿದೆ ಎಂದವರು ತಿಳಿಸಿದ್ದಾರೆ.
ಹೊಸದಾಗಿ ಆರಂಭಿಸಲಾಗುತ್ತಿರುವ ಈ ಬೋಟಿಂಗ್ ಸ್ಪೋರ್ಟ್ಸ್ ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿರಲಿದೆ ಎಂದು ತಿಳಿಸಿರುವ ಅವರು, ಮುಂದಿನ ದಿನಗಳಲ್ಲಿ ಸ್ವಯಂ ಹುಟ್ಟು ಹಾಕುತ್ತಾ ಬೋಟಿಂಗ್ ಮಾಡುವುದು, ರಾಫ್ಟಿಂಗ್, ಪೆಡಲಿಂಗ್‌ನ್ನೂ ಕೂಡ ಆರಂಭಿಸಲಾಗುವುದು ಎಂದವರು ತಿಳಿಸಿದ್ದಾರೆ.

ಜಂಗಲ್ ರೆಸಾರ್ಟ್ನಲ್ಲಿ ತಂಗುವವರು ಮಾತ್ರವಲ್ಲದೇ ಸಾರ್ವಜನಿಕರಿಗೂ ಅವಕಾಶ ಮುಕ್ತವಾಗಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕುಟುಂಬದ ಸದಸ್ಯರೊಂದಿಗೆ ಈ ಜಲಕ್ರೀಡೆಯ ಸವಿಯನ್ನು ಸವಿದು ಸಂಭ್ರಮಿಸುವಂತೆ ಅವರು ಮನವಿ ಮಾಡಿದ್ದಾರೆ.
ಸಕ್ರೆಬೈಲಿನಲ್ಲಿ ಜುಲೈ 01 ರಂದು ಬೆಳಿಗ್ಗೆ 9ಗಂಟೆಗೆ ಬೋಟಿಂಗ್ ಸ್ಪೋರ್ಟ್ಸ್ ಲೋಕಾರ್ಪಣೆ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ಉದ್ಘಾಟಿಸುವರು. ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಹನುಮಂತಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ.ನಾಗರಾಜ್, ಜಂಗಲ್ ರೆಸಾರ್ಟ್ ನಿಗಮದ ಅಧ್ಯಕ್ಷ ಅಪ್ಪಣ್ಣ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ಕುಮಾರ್, ಸಕ್ರೆಬೈಲಿನ ವ್ಯವಸ್ಥಾಪಕ ಎ.ಪಿ.ಕಿರಣ್ ಸೇರಿದಂತೆ ಜಿಲ್ಲೆಯ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು ಎಂದು ನಿಗಮದ ನಿರ್ದೇಶಕ ರಾಜೇಶ್‌ಕಾಮತ್ ಅವರು ತಿಳಿಸಿದ್ದಾರೆ.