ಡೈಲಿ ವಾರ್ತೆ : 29 ಸೆಪ್ಟೆಂಬರ್ 2022

ಸಂಪಾದಕರು: ಇಬ್ರಾಹಿಂ ಕೋಟ

ಬ್ರಹ್ಮಾವರ ಹಸಿ ಕಸ ತ್ಯಾಜ್ಯ ಘಟಕದ ವಿರುದ್ದ ಬೃಹತ್ ಪ್ರತಿಭಟನಾ ಮೆರವಣಿಗೆ: ಗ್ರಾಮಸ್ಥರಿಂದ ಚಾಂತಾರು ಗ್ರಾಮ ಪಂಚಾಯತ್‌ಗೆ ಮುತ್ತಿಗೆ.!

ಬ್ರಹ್ಮಾವರ: ತಾಲೂಕು ವ್ಯಾಪ್ತಿಯ ಚಾಂತಾರು ಹೇರೂರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ತ್ಯಾಜ್ಯ ಘಟಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು ಗ್ರಾಮಸ್ಥರು ಇಂದು ಪಂಚಾಯತ್ ಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


ಗುರುವಾರ ಬೆಳಿಗ್ಗೆ ಹೇರೂರು ಶಾಲೆಯಿಂದ ಕಾಲ್ನಡಿಗೆಯಲ್ಲಿ ಹೊರಟ ಪ್ರತಿಭಟನಾ ಮೆರವಣಿಗೆಯು ಚಾಂತರು ಕೃಷಿ ಕೇಂದ್ರಕ್ಕೆ ತೆರಳಿ ಕೇಂದ್ರದ ಮುಖ್ಯಸ್ಥ ಡಾ.ರೇವಣ್ಣ ರೇವಣ್ಣನವರ್‌ ಅವರಿಗೆ ಮನವಿ ಸಲ್ಲಿಸಿ ನಂತರ ಚಾಂತಾರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಲಾಯಿತು. ಪೊಲೀಸರು ಪಂಚಾಯತ್ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಪ್ರತಿಭಟನಾಕಾರರನ್ನು ತಡೆದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪಂಚಾಯಿತಿ ವಿರುದ್ಧ ಘೋಷಣೆ ಕೂಗಿ, ಪಂಚಾಯತ್ ಒಳಗಡೆ ಬಿಡಲು ಒತ್ತಾಯಿಸಿದರು. ಕೆಲವು ಹೊತ್ತು ಉದ್ದಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.


ಗ್ರಾಮದ ಸುಮಾರು 11 ಎಕರೆ ಪ್ರದೇಶದಲ್ಲಿ ತ್ಯಾಜ್ಯ ಘಟಕ ಸ್ಥಾಪಿಸಲು ಪಂಚಾಯತ್ ಮುಂದಾಗಿದೆ. ಈ ಪರಿಸರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, 200 ಮೀಟರ್ ಅಂತರದಲ್ಲಿ ಮಡಿಸಾಲು ಹೊಳೆ ಇದ್ದು ಸಾಕಷ್ಟು ವಾಸದ  ಮನೆಗಳಿವೆ. ಇಲ್ಲಿ ಘಟಕ ಸ್ಥಾಪನೆ ಮಾಡಿದರೆ ಜನರಿಗೆ ಮತ್ತು‌ ಪರಸರಕ್ಕೆ ಸಾಕಷ್ಟು ತೊಂದರೆಯಾಗುತ್ತದೆ. ಪರಿಸರ ಹದಗೆಡುವುದರ ಜೊತೆಗೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ‌ ಬೀರುತ್ತದೆ ಎಂಬುದು ಗ್ರಾಮಸ್ಥರ ಆರೋಪವಾಗಿತ್ತು.
ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಗುರುವಾರ ಪಂಚಾಯತ್ ಮುತ್ತಿಗೆ ಹಾಕಿ ವಿಶೇಷ ಸಭೆ ಕರೆದು ತ್ಯಾಜ್ಯ ಘಟಕ ನಿರ್ಮಾಣ ಪ್ರಸ್ತಾಪ ಕೈಬಿಡಬೇಕು ಎಂದು ಆಗ್ರಹಿಸಿದರು.


ಕೊನೆಗೆ ಪ್ರತಿಭಟನಕಾರರ ಒತ್ತಾಯಕ್ಕೆ ಮಣಿದು ಮಾತುಕತೆಗೆ ಪಂಚಾಯಿತಿ ಅಧ್ಯಕ್ಷರು ಹತ್ತು ಜನರಿಗೆ ಪಂಚಾಯತ್ ಒಳಗೆ ಪ್ರವೇಶ ನೀಡಿದರು. ಇದರಿಂದಾಗಿ ಮತ್ತಷ್ಟು ಆಕ್ರೋಶಗೊಂಡ ಪ್ರತಿಭಟನಕಾರರು ಸಾರ್ವಜನಿಕರ ಎದುರಲ್ಲೇ ಮಾತುಕತೆಗೆ ಒತ್ತಾಯಿಸಿದರು.
ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಪಂಚಾಯತ್ ಅಧ್ಯಕ್ಷೆ ಬೇಬಿ ಪೂಜಾರ್ತಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ನಾಯಕ್ ಪ್ರತಿಭಟನಾ ಸ್ಥಳಕ್ಕೆ ಬಂದು  ಪ್ರತಿಭಟನಕಾರರ  ಮನ ಒಲಿಸಿ, ಮೇಲಾಧಿಕಾರಿಗಳ ಜೊತೆ ಮಾತುಕತೆ ಮಾಡಿ ಮುಂದೆ ಯಾವುದೇ ಕಾರಣಕ್ಕೂ ಚಾಂತರು ಪಂಚಾಯತ್ ವ್ಯಾಪ್ತಿಯಲ್ಲಿ ಹಸಿ ಕಸ ತ್ಯಾಜ್ಯ ಘಟಕ ಮಾಡಲು ಅವಕಾಶ ಕೊಡುವುದಿಲ್ಲ ಎನ್ನುವ ಭರವಸೆ ಕೊಟ್ಟು ಮನವಿಯನ್ನು ಸ್ವೀಕರಿಸಿದರು.


ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸ್ಥಳೀಯ ಸಾಮಾಜಿಕ ಹೋರಾಟಗಾರ ಜ್ಞಾನ ವಸಂತ ಶೆಟ್ಟಿ  ಪಂಚಾಯತ್ 11 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಯಾವ ಕಾರಣಕ್ಜೆ ಮಾಡುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಈ ಹಿಂದೆಯೂ ಪಂಚಾಯತ್ ವ್ಯಾಪ್ತಿಯ ಮತ್ತು ಸುತ್ತಮುತ್ತ ಇದೇ ಕಾರಣಕ್ಕಾಗಿ ಪರಿಸರದ ಜನರು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದೇವೆ. ಈ ಬಗ್ಗೆ. ಪಂಚಾಯತ್ ಅಧ್ಯಕ್ಷರು ,ಪಿಡಿಓ ಗೆ ಮನವರಿಕೆ ಮಾಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಇದಕ್ಕೂ ಬಗ್ಗದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮದ ಐದು ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ನಡೆಸುತ್ತೇವೆ. ಈ ತ್ಯಾಜ್ಯ ಘಟಕದ ಪ್ರಸ್ತಾಪ ಕೈಬಿಡಬೇಕು ಎಂದು ಒತ್ತಾಯಿಸಿದರು.


ಪ್ರತಿಭಟನೆಯಲ್ಲಿ ತ್ಯಾಜ್ಯ ಹೋರಾಟ ಸಮಿತಿಯ ಸಂಚಾಲಕ ಸತೀಶ್ ಪೂಜಾರಿ, ಉಪ ಸಂಚಾಲಕ ಥಾಮಸ್ ಎಡಿಸನ್ ವಾಜ್, ಕೋಶಾಧಿಕಾರಿ ಪ್ರಭಾಕರ್ ಥಿಮ್ಸನ್, ಸಂತೋಷ್ ಜತನ್, ಹೆನ್ಸಿಲ್ ಡಿಸೋಜಾ, ಅಶೋಕ್ ಪೂಜಾರಿ, ರಮೇಶ್‌ ಕರ್ಕೆರಾ ಉಪಸ್ಥಿತರಿದ್ದರು.
ಮುಂಜಾಗ್ರತ ಕ್ರಮವಾಗಿ ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ್ ಹಾದಿಮನಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಬ್ರಹ್ಮಾವರ ಠಾಣಾ ಕ್ರೈಂ ಎಸ್ಐ ಮುಕ್ತಬಾಯಿ ಹಾಗೂ ಕೋಟ ಆರಕ್ಷಕ ಠಾಣೆಯ ಕ್ರೈಂ ಎಸ್ಐ ಪುಷ್ಪ ಮೇಡಂ ಸ್ಥಳದಲ್ಲಿದ್ದರು.