ಡೈಲಿ ವಾರ್ತೆ: 02/ಮೇ /2024

ಸಮುದ್ರದಲ್ಲಿ ದಾರಿ ತಪ್ಪಿದ ಸ್ಪೀಡ್ ಬೋಟ್: ಸೇರಿದ್ದು ಬೀಜಾಡಿಯ ಕಡಲ ತೀರಕ್ಕೆ

ಕೋಟೇಶ್ವರ:  ಮಲ್ಪೆಯ ಬಂದರಿನಿಂದ ಎ. 30ರ ರಾತ್ರಿ 12 ಗಂಟೆಗೆ ಮೀನುಗಾರಿಕೆಗೆ ಈ ಬೋಟು ಹೊರಟಿದ್ದು, 7 ಮಂದಿ ಮೀನುಗಾರರಿದ್ದರು. ಎಲ್ಲರೂ ನಿದ್ದೆಗೆ ಜಾರಿದ ಪರಿಣಾಮ ಮೇ 1ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೀಜಾಡಿಯ  ಕ್ಲಿಚ್‌ ಬೀಚ್‌ ಕಾಟೇಜ್‌ ಬಳಿಯ ಕಡಲ ತೀರಕ್ಕೆ ಬಂದು ನಿಂತಿದೆ.
ಗಾಳಿಯ ಪರಿಣಾಮದಿಂದಲೂ ಚಲಿಸುವ ಹಾದಿ ತಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

ಘಟನೆಯ ವಿವರ :
ಬೆಳಕು ಹರಿಯುತ್ತಿದ್ದಂತೆ ಸಮುದ್ರ ತಟದಲ್ಲಿ ದೊಡ್ಡ ದೋಣಿಯನ್ನು ಕಂಡು ಕುತೂಹಲದಿಂದ ಜನರು ಸೇರತೊಡಗಿದರು. ಬಂದರಿನಿಂದ ಅಳಿವೆ ಬಾಗಿಲಿನ ಮೂಲಕ ನೇರವಾಗಿ ಸಮುದ್ರ ಸೇರುವ ಆಳಸಮುದ್ರ ಬೋಟ್‌ ದಡಕ್ಕೆ ಬಂದು ನಿಂತಿರುವುದು ಕುತೂಹಲಕ್ಕೆ ಕಾರಣ. ಮೀನುಗಾರರೆಲ್ಲ ಬೋಟನ್ನು ತೊರೆದು ಹೋಗಿದ್ದರಿಂದ ಈ ಬೋಟ್‌ ಇಲ್ಲಿಗೇಕೆ ಬಂತು? ಹೇಗೆ ಬಂತು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸುವವರು ಯಾರೂ ಇರಲಿಲ್ಲ. ಬಳಿಕ ಅದು ಕೋಡಿ ಬೆಂಗ್ರೆಯ ವ್ಯಕ್ತಿಯೊಬ್ಬರ ಹೆಸರಲ್ಲಿ ನೋಂದಣಿಯಾಗಿರುವ ಬೋಟ್‌ ಆರೇಳು ಮಂದಿ ಪಾಲು ದಾರರಿದ್ದಾರೆ ಎಂಬಾ ಹಲವು ಮಾಹಿತಿ ದೊರೆತಿದೆ
ಸ್ಥಳಾಂತರ ಕಾರ್ಯ
ದಡಕ್ಕೆ ಬಂದಿದ್ದರಿಂದ ಬೋಟ್‌ ಎಂಜಿನ್‌ನ ಫ್ಯಾನಿನ ರೆಕ್ಕೆಗೆ ಸ್ವಲ್ಪ ಹಾನಿಯಾಗಿದೆ. ಅದನ್ನು ಸರಿಪಡಿಸಲಾಗಿದ್ದು, ಬುಧವಾರ ಮಧ್ಯಾಹ್ನ ಬಳಿಕ ಜೆಸಿಬಿ, ಎರಡು ದೋಣಿಗಳ ಮೂಲಕ ಆಳಸಮುದ್ರಕ್ಕೆ ಎಳೆದು ತಂದು ಮಲ್ಪೆಯತ್ತ ಕೊಂಡೊಯ್ಯಲಾಯಿತು.