ಡೈಲಿ ವಾರ್ತೆ: 01 ನವಂಬರ್ 2022

ವರದಿ: ಶಿವಾನಂದ ಆರ್.ಬಿದರಕುಂದಿ.

ಬಿತ್ತನೆಗೆ ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ: ಬಾಲಕ ಸೇರಿ ಇಬ್ಬರ ಸಾವು


ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಮೋಘಾ ಕೆ ಗ್ರಾಮದ ಹೊರವಲಯದಲ್ಲಿ ಹೊಲಕ್ಕೆ ಜೋಳ ಬಿತ್ತಲು ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿ ಮಿನಿ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.


ಮೃತ ದುರ್ದೈವಿಗಳು ಓರ್ವ ರೈತ ಹಾಗೂ ರೈತ ರೊಬ್ಬರ ಮಗನಾಗಿದ್ದು, ಪ್ರಕಾಶ್ ಬನಸೂಡೆ (32) ಹಾಗೂ ವಿನೋದ್ ಜಮಾದಾರ್ (10) ಎಂದು ಗುರುತಿಸಲಾಗಿದೆ.
ಹೊಲದಲ್ಲಿ ಜೋಳ ಬಿತ್ತಲು ಹೊರಟಿದ್ದ ಇವರು ಮಿನಿ ಟ್ರ್ಯಾಕ್ಟರ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್ ದಿಬ್ಬದ ಮೇಲೆ ಹರಿದ ಪರಿಣಾಮ ಹೊರಳಿ ಬಿದ್ದಿದೆ. ಈ ವೇಳೆ ಅವರಿಬ್ಬರು ಹೊರಬರಲಾಗದೆ ಟ್ರ್ಯಾಕ್ಟರ್ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.


ಬಾಲಕ ವಿನೋದ್ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಗೆ ಮಧ್ಯಾಹ್ನದ ಊಟವನ್ನು ತೆಗೆದುಕೊಂಡು ಹೋಗುತ್ತಿದ್ದ ಎಂದು ಹೇಳಲಾಗಿದೆ. ಈ ಕುರಿತು ಮಾದನಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.